ಗದಗ : ಹಣ್ಣು ತರಲು ಹೋದ ಬಾಲಕ ವಿಧಿಯಾಟಕ್ಕೆ ಬಲಿ
ಗದಗ,ನವೆಂಬರ್ 1 : ಸೀತಾಫಲ ಹಣ್ಣನ್ನು ತರಲು ಹೋದ ಬಾಲಕ ಮೃತಪಟ್ಟ ಘಟನೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಶಾಲೆಗೆ ರಜೆ ಇದ್ದ ಕಾರಣ ಗೆಳೆಯರ ಜೊತೆ ಸೇರಿ ಹಣ್ಣು ತರಲು ಹೋಗಿದ್ದ ಬಾಲಕ ಮರದಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.
ಮೃತಪಟ್ಟ ಬಾಲಕನನ್ನು ಮಲ್ಲಪ್ಪ ಗಡೇಕರ್ (10) ಎಂದು ಗುರುತಿಸಲಾಗಿದೆ. ಮಲ್ಲಪ್ಪ ನರಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಶಾಲೆಗೆ ರಜೆ ಇತ್ತು. ಆದ್ದರಿಂದ, ಸ್ನೇಹಿತರ ಜೊತೆ ಸೀತಾಫಲ ಹಣ್ಣು ತರಲು ನರಗುಂದ ಬಳಿ ಇರುವ ಐತಿಹಾಸಿಕ ಬೆಟ್ಟಕ್ಕೆ ಹೋಗಿದ್ದರು.

ಸೀತಾಫಲದ ಮರ ಹತ್ತಿದಾಗ ಅದರ ಕೊಂಬೆ ಮುರಿದುಬಿದ್ದಿದೆ. ಆಗ ಮಲ್ಲಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಸ್ನೇಹಿತರು ಗಾಬರಿಗೊಂಡು ಬೆಟ್ಟದ ಕೆಳಗೆ ಬಂದು ಮಲ್ಲಪ್ಪ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಪೋಷಕರು ಸ್ಥಳಕ್ಕೆ ಬಂದು ಆತನನ್ನು ಆಸ್ಪತ್ರೆಗೆ ಕರೆತಂದರು.
ಮರದಿಂದ ಬಿದ್ದಾಗ ಮಲ್ಲಪ್ಪ ತಲೆಗೆ ಪೆಟ್ಟಾಗಿತ್ತು. ಹೆಚ್ಚು ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಈ ಸಂಭಂದ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನನ್ನು ಕಳೆದು ಕೊಂಡ ಹೆತ್ತವರ ಆಕ್ರಂದನ ಮುಗುಲು ಮುಟ್ಟಿದೆ.












Click it and Unblock the Notifications