ಮಾಯಾ-ಅಖಿಲೇಶ್ ರನ್ನು ಗೌರವಿಸುತ್ತೇನೆ: ರಾಹುಲ್ ಗಾಂಧಿ
ದುಬೈ, ಜನವರಿ 13: ಕಾಂಗ್ರೆಸ್ ಅನ್ನು ಹೊರಗಿಟ್ಟು ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿ ನಡೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.
"ನಾನು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇಬ್ಬರನ್ನೂ ಗೌರವಿಸುತ್ತೇನೆ" ದುಬೈ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಉತ್ತರ ಪ್ರದೇಶದಲ್ಲಿ ಅವರು(ಎಸ್ಪಿ-ಬಿಎಸ್ಪಿ) ತಮ್ಮ ನಿರ್ಧಾರ ತೆಗೆದುಕೊಂಡಿದ್ದಾರೆ,ಹಾಗೆಯೇ ನಾವೂ ನಮ್ಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಸಾಕಷ್ಟು ಆಫರ್ ಗಳಿವೆ. ನಮಗೆ ಎಸ್ಪಿ ಮತ್ತು ಬಿಎಸ್ಪಿ ನಾಯಕರ ಬಗ್ಗೆ ಗೌರವವಿದೆ. ಅವರಿಗೆ ಏನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡುವ ಅಧಿಕಾರ ಅವರಿಗಿದೆ. ಈಗ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡಿ, ನಮ್ಮ ಸ್ವಂತ ಸಾಮರ್ಥ್ಯದ ಮೇಲೆ ಹೋರಾಡುತ್ತೇವೆ" ಎಂದು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು.
2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಾಗಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದವು. ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳನ್ನು ಸಮಾನವಾಗಿ ಹಂಚಿಕೊಂಡಿವೆ.












Click it and Unblock the Notifications