ದುಬೈನ ಮೊದಲ ಹಿಂದೂ ದೇಗುಲಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಭೇಟಿ
ಅಬುಧಾಬಿ, ಸೆಪ್ಟೆಂಬರ್ 01: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಜೈ ಶಂಕರ್, ಇದು ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ ಎಂದು ಬಣ್ಣಿಸಿದರು. ಗಲ್ಫ್ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಆಗಮಿಸಿದ ಎಸ್ ಜೈಶಂಕರ್ ಅವರು ದೇವಾಲಯದ ನಿರ್ಮಾಣದಲ್ಲಿ ಭಾರತೀಯರ ಶ್ರಮವನ್ನು ಶ್ಲಾಘಿಸಿದರು.
ಗಣೇಶ ಚತುರ್ಥಿಯಂದು, ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ @BAPS ಹಿಂದೂ ದೇವಾಲಯಕ್ಕೆ ಭೇಟಿ ನೀಡಲು ಹರ್ಷಿತನಾಗಿದ್ದೇನೆ. ಈ ತ್ವರಿತ ಪ್ರಗತಿಯನ್ನು ನೋಡಲು ನನಗೆ ಸಂತೋಷವಾಗಿದೆ. ಇಲ್ಲಿ ಬಾಪ್ಸ್ ತಂಡ, ಸಮುದಾಯ ಬೆಂಬಲಿಗರು ಮತ್ತು ಭಕ್ತರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಇಲ್ಲಿರುವ ಎಲ್ಲರ ಭಕ್ತಿಯನ್ನು ಆಳತೆ ಅರಿವಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತದ ಧ್ವನಿಗೆ ಬೆಲೆ ಧಕ್ಕಿದೆ: ಜೈಶಂಕರ್
ಬಳಿಕ ಅವರು ದುಬೈನ ಸಚಿವ ಶೇಖ್ ನಹ್ಯಾನ್ ಬಿನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು. ಭಾರತೀಯ ಸಮುದಾಯ, ಯೋಗ ಚಟುವಟಿಕೆಗಳು, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಅವರ ಬಲವಾದ ಬೆಂಬಲವನ್ನು ಶ್ಲಾಘಿಸಿದರು.
ವಿದೇಶಾಂಗ ಸಚಿವ ಜೈ ಶಂಕರ್ ಅವರ ಭೇಟಿಯ ಶುಭ ಆರಂಭವಾಗಿದೆ. ವಿದೇಶಾಂಗ ಸಚಿವರು ಬಾಪ್ಸ್ ಅಬುಧಾಬಿ ಮಂದಿರಕ್ಕೆ ಭೇಟಿ ನೀಡಿ ಆ ಸಂಕೀರ್ಣಕ್ಕೆ ವಾಸ್ತುಶಿಲ್ಪದಲ್ಲಿ ಇಟ್ಟಿಗೆಯನ್ನು ಹಾಕಿದ್ದಾರೆ. ಶಾಂತಿ, ಸಹನೆ ಮತ್ತು ಸಾಮರಸ್ಯದ ಸಂಕೇತವಾದ ಸಾಂಪ್ರದಾಯಿಕ ದೇವಾಲಯವನ್ನು ನಿರ್ಮಿಸುವಲ್ಲಿ ಎಲ್ಲಾ ಭಾರತೀಯರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಹಿಂದೆ ಟ್ವೀಟ್ ಮಾಡಿದೆ.
55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ಈ ರಚನೆಯನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳು ಕೈಯಿಂದ ಕೆತ್ತನೆ ಮಾಡುತ್ತಿದ್ದಾರೆ. ಇದನ್ನು ಯುಎಇಯಲ್ಲಿ ಜೋಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದು ದೇವಾಲಯವಾಗಲಿದೆ. ಯುಎಇಯಲ್ಲಿದ್ದಾಗ, ಎಸ್ ಜೈಶಂಕರ್ ಅವರು ತಮ್ಮ ಸಚಿವ ಗೆಳೆಯ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪರಿಶೀಲಿಸುತ್ತಾರೆ.