ಮದುವೆಗೆ ಆಮಂತ್ರಿಸಲು ಹೋಗಿದ್ದ ಮದುಮಗ ಮರಳಿ ಬರಲೇ ಇಲ್ಲ
ಧಾರವಾಡ, ನವೆಂಬರ್ 13: ಇನ್ನು ಕೆಲವೇ ದಿನಗಳಲ್ಲಿ ಆತನ ಮದುವೆ ಆಗುವುದಿತ್ತು. ಮದುವೆ ತಯಾರಿಯೂ ಭರ್ಜರಿಯಾಗಿ ಸಾಗಿತ್ತು. ಆದರೆ ಖುಷಿಖುಷಿಯಿಂದ ಮದುವೆ ಆಮಂತ್ರಣ ನೀಡಲು ಹೋದವ ತಿರುಗಿ ಬಂದದ್ದು ಹೆಣವಾಗಿ.
ಹೀಗೊಂದು ಹೃದಯ ವಿದ್ರಾವಕ ಘಟನೆ ನಡೆದಿರುವುದು ಧಾರವಾಡದಲ್ಲಿ. ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ಬಳಿ ಮಂಗಳವಾರ ಸಂಜೆ ವೇಳೆಗೆ ನಡೆದಿದೆ.
ಮದುವೆ ಆಮಂತ್ರಣ ನೀಡಲು ಹೋಗಿದ್ದ ಮದುಮಗ ಮಹಮದ್ ಅಸ್ಲಾಂ ಶಹಾಪೂರ (24) ಎಂಬುವವರೇ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ಸವದತ್ತಿಯಿಂದ ಧಾರವಾಡಕ್ಕೆ ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ಸಮಯ ಈ ದುರ್ಘಟನೆ ನಡೆದಿದೆ. ಮುಂದಿನ ತಿಂಗಳು ಡಿಸೆಂಬರ್ 1ರಂದು ಮಹಮದ್ ಮದುವೆ ನಿಗದಿಯಾಗಿತ್ತು. ಆದರೆ ಮದುವೆ ನೋಡಬೇಕಿದ್ದ ಆತನ ಪೋಷಕರು ಮಗನ ಶವ ಕಂಡು ಕಣ್ಣೀರಾಗಿದ್ದಾರೆ.

ಮದುಮಗನ ಜೊತೆ ಇದ್ದ ಸಹಸವಾರ ಇಸಾಕ್ ಕೂಡ ಗಂಭೀರ ಗಾಯಗೊಂಡಿದ್ದು, ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications