ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧತೆ: ಧಾರವಾಡ ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ?
ಹುಬ್ಬಳ್ಳಿ, ಮೇ 16: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಧಾರವಾಡ ಜಿಲ್ಲೆ ಕಾಂಗ್ರೆಸ್ಸಿಗೆ ಬಹುದೊಡ್ಡ ಗೆಲುವಿನ ಕೊಡುಗೆ ಕೊಟ್ಟಿದೆ. ಏಳು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರದಲ್ಲಿ ಕೈ ಭಾವುಟ ಹಾರಿದ್ದು, ಈಗ ಸಚಿವ ಸ್ಥಾನದ ಜಟಾಪಟಿ ಜೋರಾಗಿಯೇ ನಡೆದಿದೆ.
ಕಳೆದ ಒಂದು ತಿಂಗಳಿಂದ ನಡೆದ ಚುನಾವಣೆ ಪ್ರಕ್ರಿಯೆ ಫಲಿತಾಂಶದೊಂದಿಗೆ ಸಂಪನ್ನಗೊಂಡಿದ್ದು, ಹೊಸ ಸರಕಾರದಲ್ಲಿ ಜಿಲ್ಲೆಯಿಂದ ಯಾವ ಶಾಸಕರು ಸಚಿವರಾಗಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ, ಧಾರವಾಡ ಗ್ರಾಮೀಣ, ಕಲಘಟಗಿ ಹಾಗೂ ನವಲಗುಂದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಕುಂದಗೋಳ, ಹು-ಧಾ ಪಶ್ಚಿಮ ಹಾಗೂ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ನಿಂದ ಚುನಾಯಿತಗೊಂಡ ನಾಲ್ವರೂ ಹಿರಿತನದ ಶಾಸಕರಾಗಿದ್ದಾರೆ. ಈ ನಾಲ್ವರಲ್ಲಿ ಯಾರು ಸಚಿವರಾಗಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಶುರುವಾಗಿವೆ.
ಸಂತೋಷ ಲಾಡ್ 2008, 2013 ಹಾಗೂ 2023ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು. ವಿನಯ ಕುಲಕರ್ಣಿ 2004, 2013 ಹಾಗೂ 2023ರ ಎಲೆಕ್ಷನ್ದಲ್ಲಿ ಜಯ ಸಾಧಿಸಿದ್ದಾರೆ. ಇವರೊಂದಿಗೆ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಪ್ರಸಾದ ಅಬ್ಬಯ್ಯ ಸತತ ಮೂರನೇ ಬಾರಿ ಉತ್ತಮ ಅಂತರದಿಂದ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ.

ಆದರೆ, ಸಂತೋಷ ಲಾಡ್ ಮತ್ತು ವಿನಯ ಕುಲಕರ್ಣಿ 2013-2018ರ ಸಿದ್ದರಾಮಯ್ಯ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿ ಕೆಲಸ ಮಾಡಿದರು. ಆ ವೇಳೆ ಪ್ರಸಾದ ಅಬ್ಬಯ್ಯ ಎರಡನೇ ಅವಧಿಯಲ್ಲಿ ಗೆದ್ದಿದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಪ್ರಸಾದ ಅಬ್ಬಯ್ಯ ಅವರಿಗೆ ಸರಕಾರದ ಅವಧಿಯ ಕೊನೆ ವರ್ಷದಲ್ಲಿ ಜಗಜೀವನರಾಮ್ ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡಲಾಗಿತ್ತು.
ಇನ್ನೂ ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ತೊರೆದು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿರುವ ಎನ್.ಎಚ್.ಕೋನರೆಡ್ಡಿ ಆ ಪಕ್ಷದಲ್ಲಿನ ಜಿಲ್ಲೆಯ ಇತರ ಶಾಸಕರ ಸೀನಿಯಾರಿಟಿ ಲೆಕ್ಕದಲ್ಲಿ ಜ್ಯೂನಿಯರ್. ಹೀಗಾಗಿ ಸದ್ಯದ ಸನ್ನಿವೇಶದಲ್ಲಿ ಸಂತೋಷ ಲಾಡ್, ವಿನಯ ಕುಲಕರ್ಣಿ ಮತ್ತು ಪ್ರಸಾದ ಅಬ್ಬಯ್ಯ ಮಧ್ಯೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುವ ಸಾಧ್ಯತೆ ಇದೆ.












Click it and Unblock the Notifications