ಧಾರವಾಡ: ಯೋಗೇಶಗೌಡ ಕೊಲೆ ಹಿಂದೆ ಕಾಣದ ಕೈ ಕೈವಾಡ
ಹುಬ್ಬಳ್ಳಿ,ಜೂನ್, 15: ಶೈಕ್ಷಣಿಕ ನಗರಿ ಧಾರವಾಡ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆಯಿಂದ ಬೆಚ್ಚಿಬಿದ್ದಿದೆ. ಇದರೊಂದಿಗೆ ಹತ್ಯೆ ಇಂದೆ ಅವರಿದ್ದಾರೆ, ಇವರಿದ್ದಾರೆ, ಎಂಬ ಮಾತುಗಳು ಜನರಿಂದ ಹಿಡಿದು ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ.
ಸಾಹಿತಿ ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆ ಇಡೀ ರಾಜ್ಯದಲ್ಲಿ ತಲ್ಲಣ ಉಂಟುಮಾಡಿತ್ತು. ಇದೀಗ ಮತ್ತೊಮ್ಮೆ ಧಾರವಾಡಕ್ಕೆ ರಕ್ತದ ಕಲೆ ಅಂಟಿಕೊಂಡಿದೆ. ಯೋಗೇಶಗೌಡ ಕೊಲೆ ಹಿಂದೆ ರಾಜಕೀಯ ಷಡ್ಯಂತ್ರವಿದೆಯೋ ಅಥವಾ ಜಮೀನು ವಿವಾದ ಇತ್ತೋ, ಹಳೇ ದ್ವೇಷ ಕಾರಣವೋ ಎಂಬುದಕ್ಕೆ ಪೊಲೀಸರ ತನಿಖೆಯೇ ಉತ್ತರ ಹೇಳಬೇಕು.[ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]
ಧಾರವಾಡದಲ್ಲಿ ಇಂಥ ಘಟನಾವಳಿಗಳು ಸಂಭವಿಸಲು ಪೊಲೀಸ್ ವೈಫಲ್ಯ ಕಾರಣವೇ? ಹೀಗೊಂದು ಪ್ರಶ್ನೆ ನಾಗರಿಕ ವಲಯದಲ್ಲಿ ಎದ್ದಿದೆ. ಕಳಸಾ ಬಂಡೂರಿ ಹೋರಾಟದ ಸಮಯದಲ್ಲೂ ಪೊಲೀಸರ ನಡವಳಿಕೆ ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು.
ಜಿಮ್ ನಡೆಸುತ್ತಿದ್ದ ಗೌಡ
ನಗರದ ಮಧ್ಯ ಭಾಗದ ಸಪ್ತಾಪುರದಲ್ಲಿರುವ ಉದಯ್ ಜಿಮ್ ಅನ್ನು ಯೋಗೇಶಗೌಡ ಅವರು ತಮ್ಮ ಅಣ್ಣನ ಹೆಸರಿನಲ್ಲಿ ನಡೆಸುತ್ತಿದ್ದರು. ಹೆಲ್ತ್ ಕೇರ್ ಮತ್ತು ಫಿಟ್ನೆಸ್ ತರಬೇತಿ ನೀಡಲಾಗುತ್ತಿತ್ತು. ಅಲ್ಲಿ ಬೆಳಗ್ಗೆ ಯುವತಿಯರಿಗೆ ತರಬೇತಿ ನೀಡಲಾಗುತ್ತಿತ್ತು. ನಂತರ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೇ ಹೊಸ ಇನ್ನೋವಾ ಕಾರು ಖರೀದಿಸಿದ್ದ ಯೋಗೇಶ ಗೌಡ ಅವರು ಧಾರವಾಡ ಸಮೀಪದ ತಮ್ಮ ಸ್ವಗ್ರಾಮ ಗೋವನಕೊಪ್ಪದಿಂದ ನಿತ್ಯ ತಮ್ಮ ಜಿಮ್ ಬರುತ್ತಿದ್ದರು.
ನಾಲ್ವರು ಕೊಲೆಗಾರರು
ಎಂದಿನಂತೆ ಜಿಮ್ ಗೆ ಆಗಮಿಸಿದ ಗೌಡ ಪೇಪರ್ ಓದುತ್ತಾ ಕುಳಿತುಕೊಂಡಿದ್ದಾಗ ಆಗಮಿಸಿದ ನಾಲ್ವರು ದುಷ್ಕರ್ಮಿಗಳ ತಂಡ ಅವರನ್ನು ರಕ್ತದ ಮಡುವಿನಲ್ಲಿ ಕೆಡಗಿ ಪರಾರಿಯಾಗಿದೆ. ಜಿಮ್ ನಲ್ಲಿಯೇ ಯೋಗೇಶ್ ಅವರನ್ನು ಬೆನ್ನತ್ತಿದ ದುಷ್ಕರ್ಮಿಗಳು ಮಚ್ಚಿನಿಂದ ತಲೆಯ ನೆತ್ತಿಯ ಮೇಲೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ. ಜಿಮ್ ನಲ್ಲಿ ಕೆಲಸ ಮಾಡುವವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಜೆಪಿಗೆ ಬಂದಿದ್ದ ಗೌಡ
ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿ ಧಾರವಾಡ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಯೋಗೇಶಗೌಡ ನಂತರ ಬಿಜೆಪಿಯಿಂದ ಸ್ಪರ್ಧಿಸಿ ಜಿ.ಪಂ.ಗೆ ಆಯ್ಕೆಯಾಗಿದ್ದರು. ಜಿ.ಪಂ.ಚುನಾವಣೆ ದಿನದ ಹಿಂದಿನ ದಿನವೇ ಇವರನ್ನು ಪೊಲೀಸರು ಬಂಧಿಸಿದ್ದರು. ಯೋಗೇಶ್ ಬಂಧನ ಖಂಡಿಸಿ ಮಾಝಿ ಸಿಎಂ ಜಗದೀಶ್ ಶೆಟ್ಟರ್ ಆದಿಯಾಗಿ ಪ್ರತಿಭಟನೆ ನಡೆಸಿದ್ದರು.
ನಮಗೇನು ಗೊತ್ತಿಲ್ಲ ಎಂದ ಕುಲಕರ್ಣಿ
ನಾನು ಸಂಪುಟ ಸಭೆಗಾಗಿ ಬೆಂಗಳೂರಿನಲ್ಲಿದ್ದೇನೆ. ವೈಯಕ್ತಿಕ ಕಾರಣಗಳಿಂದ ಕೊಲೆಯಾಗಿರಬುದು. ರಾಜಕೀಯವಾಗಿ ನಾವೇನೂ ಅವರ ದ್ವೇಷಿಗಳಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಭಟನೆ ಮಾಡಿದ್ದ ಗೌಡ
ಜಿ.ಪಂ.ಚುನಾವಣೆ ಪ್ರಚಾರಕ್ಕೆ ಪೊಲೀಸರು ಕಾಂಗ್ರೆಸ್ ಗೆ ಸಹಾಯ ಮಾಡುತ್ತಿದ್ದಾರೆ ಎಂದು ಯೋಗೇಶಗೌಡ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಚುನಾವಣಾ ಮುನ್ನಾ ದಿನವೇ ಯೋಗೇಶಗೌಡರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಯೋಗೇಶ ಬಂಧನ ಖಂಡಿಸಿ ಬಿಜೆಪಿ ಧುರೀಣರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಪ್ರತಿಭಟನೆ ನಡೆಸಿದ್ದರು.
ರೌಡಿ ಶೀಟರ್
ಯೋಗೇಶ್ ಗೌಡ ಒಬ್ಬ ರೌಡಿ ಶೀಟರ್, ಹಲವಾರು ಅಪರಾಧ ಪ್ರಕರಣಗಳು ಆತನ ಮೇಲಿವೆ. ಇಂಥಹವರನ್ನು ಬಿಜೆಪಿ ಬೆಂಬಲಿಸಿ ಹೋರಾಟ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪ ಮಾಡಿತ್ತು
ಜಮೀನು ವಿವಾದ ಕಾರಣ
ಜಿಪಂ ಸದಸ್ಯ ಗೌಡ ಕೊಲೆಗೆ ಜಮೀನು ವಿವಾದ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೊಲೀಸರಿಗೆ ಶೀಘ್ರ ತನಿಖೆ ಮಾಡಿ ಅಪರಾಧಿಗಳನ್ನು ಬಂಧಿಸಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.
ಬೇಜವಾಬ್ದಾರಿ ಹೇಳಿಕೆ
ಡಾ. ಜಿ ಪರಮೇಶ್ವರ ಉನ್ನತ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ತನಿಖೆ ಮಾಡದೆಯೇ ತೀರ್ಮಾನಕ್ಕೆ ಬಂದಂತೆ ಇದೆ ಎಂದು ಮಾಜಿ ಮುಖ್ಯಮಂತ್ರಿ , ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದು ಕೊಲೆ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದಿದ್ದಾರೆ.