ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ನಾಮಪತ್ರ
ಧಾರವಾಡ, ಏಪ್ರಿಲ್ 02 : ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಮಂಗಳವಾರ ರಾತ್ರಿ ವಿನಯ್ ಕುಲಕರ್ಣಿ ಅವರು ಈ ಕುರಿತು ಮಾಹಿತಿ ನೀಡಿದರು. 'ಬುಧವಾರ ಬೆಳಗ್ಗೆ 10.45ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇನೆ' ಎಂದು ಹೇಳಿದರು.
ಧಾರವಾಡ ಕಾಂಗ್ರೆಸ್ ಟಿಕೆಟ್ ಗೊಂದಲ : ವಿನಯ್ ಕುಲಕರ್ಣಿ ಅಸಮಾಧಾನ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಏ.23ರಂದು ಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನವಾಗಿದೆ. ಕೇವಲ ಎರಡು ದಿನಗಳು ಬಾಕಿ ಉಳಿದಿದ್ದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.
ಧಾರವಾಡಲ್ಲಿ 16,88,067 ಮತದಾರರು, ಏ.23ರಂದು ಮತದಾನ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ವಿನಯ್ ಕುಲಕರ್ಣಿ ಅವರು ಇದರಿಂದಾಗಿ ಅಸಮಧಾನಾಗೊಂಡಿದ್ದಾರೆ. ಆದ್ದರಿಂದ, ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
'ತಿಂಗಳ ಹಿಂದೆಯೇ ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವಂತೆ ಸೂಚನೆ ಸಿಕ್ಕಿತ್ತು. ಪ್ರಚಾರ ಆರಂಭಿಸಿದ್ದೇವೆ. ಆದರೆ, ಅಧಿಕೃತವಾಗಿ ಪಕ್ಷದ ಬಿ-ಫಾರಂ ಸಿಕ್ಕಿಲ್ಲ. ಇದೇ ಮೊದಲ ಬಾರಿಗೆ ಟಿಕೆಟ್ಗಾಗಿ ದೆಹಲಿ ತನಕ ಹೋಗುವ ಪರಿಸ್ಥಿತಿ ಬಂದಿದೆ' ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವಿನಯ್ ಕುಲಕರ್ಣಿ ಅವರು, 'ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಅಸಾಧ್ಯವೇನಲ್ಲ. ಈ ಹಿಂದೆ ನಾನು ಪಕ್ಷೇತರನಾಗಿ ಗೆದ್ದು ಬಂದಿದ್ದೇನೆ' ಎಂದು ಎರಡು ದಿನಗಳ ಹಿಂದೆ ಅವರು ಹೇಳಿದ್ದರು.