ಲಾಕ್ಡೌನ್: ಸ್ಯಾನಿಟೈಸರ್ ಕುಡಿದು ಸಂಶೋಧನಾ ವಿದ್ಯಾರ್ಥಿ ಸಾವು?
ಧಾರವಾಡ, ಏ. 27: ರಾಜ್ಯದಲ್ಲಿ ಕೊರೊನಾ ವೈರಸ್ಗೆ ತುತ್ತಾಗಿ ಸಾವನ್ನಪ್ಪಿರುವವರಿಗಿಂತ ಮದ್ಯ ವ್ಯಸನಿಗಳ ಸಾವು ಹೆಚ್ಚಾಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗುವಂತೆ ಕಾಣುತ್ತಿದೆ. ಇಲ್ಲಿನ ಹೊಯ್ಸಳನಗರದ ಬಡಾವಣೆಯಲ್ಲಿ ಸಂಶೋಧನಾ ವಿದ್ಯಾರ್ಥಿಯೊಬ್ಬ ಸ್ಯಾನಿಟೈಸರ್ ಕುಡಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
Recommended Video
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದ ಮದ್ಯ ವ್ಯಸನಿಗಳಿಗೆ ಕುಡಿಯಲು ಮದ್ಯ ಸಿಗುತ್ತಿಲ್ಲ. ಸರ್ಕಾರ ಕೂಡ ಲಾಕ್ಡೌನ್ ಕೊನೆಯಾಗುವವರೆಗೆ ಮದ್ಯದ ಅಂಗಡಿಗಳನ್ನು ಓಪನ್ ಮಾಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಅಲ್ಕೊಹಾಲ್ ಅಂಶವಿರುವ ಸ್ಯಾನಿಟೈಸರ್ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ನಗರದಲ್ಲಿಯೂ ಕೂಡ ಸ್ಯಾನಿಟೈಸರ್ ಕುಡಿದು ಸಂಶೋಧನಾ ವಿದ್ಯಾರ್ಥಿ ಸುದೀಪ್ ಕರಿಯಣ್ಣ(29) ಎಂಬುವರು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಪಟ್ಟಣದ ನಿವಾಸಿಯಾಗಿದ್ದ ಸುದೀಪ್ ಕರಿಯಣ್ಣ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ನಿತ್ಯವೂ ಮದ್ಯ ಸೇವಿಸುವ ಅಭ್ಯಾಸವಿತ್ತು ಎನ್ನಲಾಗಿದೆ. ಧಾರವಾಡದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ, ಸುದೀಪ್ ಶವದ ಬಳಿ 2 ಸ್ಯಾನಿಟೈಸರ್ ಬಾಟಲ್ಗಳು ಪತ್ತೆಯಾಗಿವೆ. ಧಾರವಾಡದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಸಾವಿನ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆಯಷ್ಟೆ ವ್ಯಕ್ತಿಯೊಬ್ಬ ಸ್ಯಾನಿಟೈರಸ್ ಕುಡಿದು ಜಿಲ್ಲಾಸ್ಪತ್ರೆ ಪಾಲಾಗಿದ್ದ ಘಟನೆ ನಡೆದಿತ್ತು.