ಧಾರವಾಡ: ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ ಸ್ಟಾರ್ ಏರ್ಲೈನ್ಸ್ಗೆ 8 ಲಕ್ಷ ರೂ ದಂಡ
ಧಾರವಾಡ, ಆಗಸ್ಟ್ 29: ಧಾರವಾಡದ ಮಹಿಳಾ ವಕೀಲರಾದ ಶ್ರೀಮತಿ ಮಹೇಶ್ವರಿ ಉಪ್ಪಿನ (ದೇಸಾಯಿ) ಮತ್ತು ಅವರ 26 ಸಂಗಡಿಗರು ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ಅವರ ಮೂಲಕ 09/10/2022 ರಿಂದ 19/10/2020 ರವರೆಗೆ ದೆಹಲಿ, ಹರಿದ್ವಾರ, ಅಯೋಧ್ಯೆ, ಕಾಶಿ, ಪ್ರಯಾಗರಾಜ, ಮಥುರಾ ಸೇರಿ ಉತ್ತರ ಭಾರತದ ಪ್ರವಾಸ ನಿಗದಿ ಮಾಡಿಕೊಂಡಿದ್ದರು.
ದೆಹಲಿಯಿಂದ ಹೊರಟು ಆ ಎಲ್ಲಾ ಕ್ಷೇತ್ರಗಳ ದರ್ಶನ ಮಾಡಿಸಿಕೊಂಡು ವಾಪಸ್ಸು ದೆಹಲಿಗೆ ಕರೆತರುವ ಜವಾಬ್ದಾರಿ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ಮತ್ತು ಟ್ರಾವಲ್ಸ್ ನವರದಾಗಿತ್ತು. ಆ ಬಗ್ಗೆ ಎಲ್ಲ ಪ್ರವಾಸಿಗರೂ ಸುರಕ್ಷಾ ಟೂರ್ಸ್ ಮಾಲೀಕ ಸುನೀಲ್ ತೊಗರಿಯವರಿಗೆ ಅಂದಾಜು ತಲಾ ರೂ 21,000 ರೂಪಾಯಿಯಂತೆ ಹಣ ಸಂದಾಯ ಮಾಡಿದ್ದರು.

ಹುಬ್ಬಳ್ಳಿಯಿಂದ ದೆಹಲಿ ವರೆಗೆ ತಲುಪಲು ಎಲ್ಲ 27 ಜನ ಪ್ರವಾಸಿಗರು ಜೂನ್-2022 ರಲ್ಲಿ ಸ್ಟಾರ್ ಏರಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. 9/10/2022 ರಂದು ತಮ್ಮ ಪ್ರಯಾಣಕ್ಕೆ ಎಲ್ಲ ಪ್ರವಾಸಿಗರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸಡನ್ನಾಗಿ 09/10/2022 ರಂದು ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದ ಸ್ಟಾರ್ ಏರಲೈನ್ಸ್ ರದ್ಧಾಗಿರುವುದಾಗಿ ಸಂಗಡಿಗರಿಗೆ ಮಾಹಿತಿ ಬಂತು.
ಈ ಸ್ಟಾರ್ ಏರಲೈನ್ಸ್ರವರು ದೆಹಲಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಸುರಕ್ಷಾ ಟೂರ್ಸಿನ ಮಾಲೀಕ ಸುನೀಲ್ ತೊಗರಿ ತನ್ನ ಖರ್ಚು ಹಾಕಿ ಬೇರೆ ಬೇರೆ ಮಾರ್ಗಗಳ ಮೂಲಕ 09/10/2022ರ ರಾತಿ ಎಲ್ಲ ದೂರುದಾರರು/ಪ್ರವಾಸಿಗರಿಗೆ ದೆಹಲಿ ತಲುಪುವ ವ್ಯವಸ್ಥೆ ಮಾಡಿದರು. ದೆಹಲಿಯಿಂದ ಎಲ್ಲ ಕಡೆ ಸುತ್ತಾಡಿ ಪೂರ್ವ ನಿಗದಿತ ಕಾರ್ಯಕ್ರಮದಂತೆ ಸುರಕ್ಷಾ ಟೂರ್ಸ್ ಅವರು ಎಲ್ಲ ಪ್ರವಾಸಿಗರನ್ನು ವಾಪಸ್ಸು ಹುಬ್ಬಳ್ಳಿಗೆ ಕರೆತಂದು ಬಿಟ್ಟರು.
09/10/2022 ರಂದು ತಮ್ಮ ಪ್ರಯಾಣಕ್ಕೆ ಜೂನ್ ತಿಂಗಳಲ್ಲೇ ಟಿಕೆಟ್ ನಿಗದಿಯಾಗಿದ್ದರೂ ಪ್ರಯಾಣದ ಹಿಂದಿನ ದಿವಸ ಸ್ಟಾರ್ ಏರಲೈನ್ಸ್ ಸಡನ್ನಾಗಿ ರದ್ದುಪಡಿಸಿದ್ದರಿಂದ ತಮಗೆ ಅನಾನುಕೂವಾಯಿತು ಹಾಗೂ ಅದರಿಂದ ಮಾನಸಿಕ ತೊಂದರೆಯಾಯಿತು ಕಾರಣ ಅವರೆಲ್ಲರೂ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಸುರಕ್ಷಾ ಟೂರ್ಸ್ ಮತ್ತು ಸ್ಟಾರ್ ಏರ್ಲೈನ್ಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ 27 ಜನ ದೂರುದಾರರು ಗ್ರಾಹಕರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 01/02/2023 ರಂದು ದೂರನ್ನು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ 09/10/2022ರ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣಿಸುವ ವಿಮಾನವನ್ನು ಸ್ಟಾರ್ ಏರಲೈನ್ಸ್ ರವರು ಸಡನ್ನಾಗಿ ರದ್ದುಪಡಿಸಿದ್ದರೂ ಸುರಕ್ಷಾ ಟೂರ್ಸನ ಮಾಲೀಕ ಸುನೀಲ್ ತೊಗರಿ ಶ್ರಮ ವಹಿಸಿ ತನ್ನದೇ ಹಣಖರ್ಚು ಮಾಡಿ ಹೈದರಾಬಾದ್ ಮೂಲಕ ಕೆಲವು ದೂರುದಾರರಿಗೆ, ಮುಂಬೈ ಮೂಲಕ ಕೆಲವು ದೂರುದಾರರಿಗೆ ವಿಮಾನ ಮೂಲಕ ಬೇರೆ ವ್ಯವಸ್ಥೆ ಮಾಡಿ ಎಲ್ಲಾ ದೂರುದಾರರು ನಿಗದಿತ ಸಮಯಕ್ಕೆ ದೆಹಲಿ ತಲುಪುವಂತೆ ಮಾಡಿದ್ದಾರೆ.
ದೆಹಲಿಯಿಂದ ಎಲ್ಲ ಪ್ರವಾಸಿ ತಾಣಗಳನ್ನು ತೋರಿಸಿ ನಿಗದಿತ ಕಾರ್ಯಕ್ರಮದಂತೆ 19/10/2022 ರಂದು ಎಲ್ಲ ದೂರುದಾರರನ್ನು ಹುಬ್ಬಳ್ಳಿಗೆ ಕರೆತಂದಿರುವುದರಿಂದ ಹುಬ್ಬಳ್ಳಿಯ ಸುರಕ್ಷಾ ಟೂರ್ಸ್ ನವರದು ಯಾವುದೇ ರೀತಿ ಸೇವಾ ನ್ಯೂನ್ಯತೆ ಆಗಿಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಹುಬ್ಬಳ್ಳಿಯಿಂದ ದೆಹಲಿಗೆಕರೆದೊಯ್ಯುವ ಹೊಣೆಗಾರಿಕೆ ತನ್ನದಲ್ಲದಿದ್ದರೂ ಸುರಕ್ಷಾ ಟೂರ್ಸ್ನ ಮಾಲೀಕ ಸುನೀಲ್ ತೊಗರಿ ತನ್ನ ಗ್ರಾಹಕರಿಗೆ ತೊಂದರೆ ಆಗಬಾರದು ಅಂತಾ ಪರ್ಯಾಯ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯ ಅಂತಾ ಅವರ ನಡಾವಳಿಕೆಗೆ ಆಯೋಗ ಮೆಚ್ಚಿಗೆ ವ್ಯಕ್ತಪಡಿಸಿದೆ.
ಆದರೆ ಸಡನ್ನಾಗಿ ವಿಮಾನ ರದ್ದುಪಡಿಸಿ ಪ್ರವಾಸಿಗರಿಗೆ ಬೇರೆ ವ್ಯವಸ್ಥೆ ಮಾಡದೇ ಇರುವುದರಿಂದ ಸ್ಟಾರ್ ಏರಲೈನ್ಸ್ ರವರು ಎಲ್ಲ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ತನ್ನ ತೀರ್ಪಿನಲಿಲ್ಲಿ ಅಭಿಪ್ರಾಯ ಪಟ್ಟಿದೆ. ಅದರಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಸ್ಟಾರ್ ಏರಲೈನ್ಸ್ ಅವರು ಎಲ್ಲ 27 ದೂರುದಾರರಿಗೆ ತಲಾ 25,000 ರೂಪಾಯಿಗಳನ್ನು ಪರಿಹಾರ ಮತ್ತು 5,000 ರೂಗಳನ್ನು ಪ್ರಕರಣದ ನಡೆಸಿದ ಖರ್ಚು ವೆಚ್ಚ ಅಂತಾ ಒಟ್ಟು 8,10,000 ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸ್ಟಾರ್ ಏರಲೈನ್ಸ್ ಅವರಿಗೆ ನಿರ್ದೇಶನ ನೀಡಿದೆ.
ಸಡನ್ನಾಗಿ ವಿಮಾನ ರದ್ದಾಗಿ ತಕ್ಷಣ ಬೇರೆ ವಿಮಾನ ವ್ಯವಸ್ಥೆ ಮಾಡಿದ್ದರಿಂದ ತಾನು ರೂ.1,66,823/-ಗಳನ್ನು ಹೆಚ್ಚಿಗೆ ಖರ್ಚು ಮಾಡಿದ್ದೇನೆ ಅನ್ನುವ ಸುರಕ್ಷಾ ಟೂರ್ಸ್ನ ಮಾಲೀಕ ಸುನೀಲ್ ತೊಗರಿಯವರ ಬೇಡಿಕೆಯನ್ನು ಆಯೋಗ ಪುರಸ್ಕರಿಸಿದೆ.
ಆ ಹಣ 1,66,823 ರೂಪಾಯಿಗಳನ್ನು ಒಂದು ತಿಂಗಳ ಒಳಗಾಗಿ ಸುರಕ್ಷಾ ಟೂರ್ಸ್ನವರಿಗೆ ಕೊಡುವಂತೆ ಸ್ಟಾರ್ ಏರಲೈನ್ಸ್ ನವರಿಗೆ ಆಯೋಗ ತಿಳಿಸಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಮೇಲೆ ಹೇಳಿದ ಹಣ ಸ್ಟಾರ್ ಏರಲೈನ್ಸ್ ಅವರು ಕೊಡದೇ ಇದ್ದಲ್ಲಿ ಆ ಎಲ್ಲ ಹಣದ ಮೇಲೆ ಈ ತೀರ್ಪು ನೀಡಿದ ದಿನಾಂಕದಿಂದ ಶೆಕಡಾ 8% ರಂತೆ ಬಡ್ಡಿ ಕೊಡಲು ಆದೇಶಿಸಿದೆ.












Click it and Unblock the Notifications