ಟಿಕೇಟ್ 'ಕೈ' ತಪ್ಪಿದ್ದಕ್ಕೆ ಧ್ವಜ ಸುಟ್ಟ ಎಸ್.ಆರ್. ಮೊರೆ ಬೆಂಬಲಿಗರು
ಧಾರವಾಡ, ಏಪ್ರಿಲ್ 17 : ಟಿಕೇಟ್ ಕೈತಪ್ಪಿರುವುದಕ್ಕೆ ಎಲ್ಲಾ ಪಕ್ಷಗಳಲ್ಲೂ ಬಂಡಾಯವೇಳುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವರು ಪಕ್ಷೇತರರಾಗಿ ನಿಲ್ಲುವ ಆಕಾಂಕ್ಷೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಪಕ್ಷದ ಧ್ವಜ ಸುಟ್ಟಿ, ಬೈಕ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್.ಆರ್. ಮೊರೆ ಅವರಿಗೆ ಟಿಕೇಟ್ ಕೈ ತಪ್ಪಿದ್ದರಿಂದ ಮಂಗಳವಾರ ಮರಾಠ ಸಮಾಜ ಬಾಂಧವರು ಕಾಂಗ್ರೆಸ್ ಪಕ್ಷದ ಧ್ವಜ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೋರೆಯವರ ಟಿಕೇಟ್ ಕೈ ತಪ್ಪಲು ಸಚಿವ ವಿನಯ ಕುಲಕರ್ಣಿ ಅವರೇ ಕಾರಣ. ಅವರು ಮನಸ್ಸು ಮಾಡಿದ್ದರೆ ಟಿಕೇಟ್ ಕೊಡಿಸಬಹುದಿತ್ತು. ಆದರೆ ಅವರು ಪ್ರಯತ್ನ ಮಾಡದಿರುವುದು ಮರಾಠ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ಸಮಾಜ ಬಾಂಧವರು ತುರ್ತು ಸಭೆ ಸೇರಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮೊರೆಯವರನ್ನು ಕಣಕ್ಕೆ ಇಳಿಸುವ ಮೂಲಕ ಮರಾಠ ಸಮಾಜದ ಶಕ್ತಿ ಪ್ರದರ್ಶನ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ಮೊರೆ ಅವರು ಮಾತ್ರ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆ ತಮ್ಮ ನಿರ್ಧಾರ ಸ್ಪಷ್ಟಪಡಿಸಿಲ್ಲ.
ಪ್ರತಿಭಟನೆಯಲ್ಲಿ ನಾರಾಯಣ ಹುಬ್ಬಳ್ಳಿ, ವಿಜಯ ಭೋಸ್ಲೆ, ಹೇಮಂತ ಕಾಂಬಡೆ, ಬಸವರಾಜ ಜಾಧವ, ವಿಠ್ಕಲ ಚವ್ಹಾಣ, ತಾನಾಜಿ ಘಾಟಗೆ , ರಾಜು ಕಾಳೆ ಮತ್ತಿತರರು ಇದ್ದರು.












Click it and Unblock the Notifications