ಆಮ್ ಆದ್ಮಿಯಿಂದ ಎಸ್.ಆರ್.ಹಿರೇಮಠ ಚುನಾವಣೆಗೆ?
ಧಾರವಾಡ, ಜ.13 : ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಆಮ್ ಆದ್ಮಿ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ? ಈ ಕುರಿತು ಪಕ್ಷ ಅವರಿಗೆ ಆಹ್ವಾನ ನೀಡಿದೆ. ಆದರೆ, ಹಿರೇಮಠ ಈ ಕುರಿತು ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಆಮ್ ಆದ್ಮಿ ಪಕ್ಷದಿಂದ ತಮಗೆ ಆಹ್ವಾನ ಬಂದಿದೆ. ಆದರೆ, ಆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಭಾನುವಾರ ಧಾರವಾಡದಲ್ಲಿ ತಿಳಿಸಿದ್ದಾರೆ. [ಹಿರೇಮಠ ಅವರಿಗೆ ಒನ್ ಇಂಡಿಯಾ ಪ್ರಶಸ್ತಿ]
ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಆಹ್ವಾನ ನೀಡಿದೆ. ಈ ವಿಚಾರವಾಗಿ ಆಮ್ ಆದ್ಮಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೆ, ನನಗೀಗ 69 ವರ್ಷ ವಯಸ್ಸು. ನನ್ನಂತಹ ವಯಸ್ಸಾದವರು ಚುನಾವಣೆಗೆ ನಿಲ್ಲುವ ಬದಲು 40ರ ಆಸುಪಾಸಿನ ಯುವಕರಿಗೆ ಅವಕಾಶ ನೀಡುವುದು ಉತ್ತಮ ಎಂದು ಹಿರೇಮಠ ಅಭಿಪ್ರಾಯಪಟ್ಟರು. [ಹಿರೇಮಠ ಸಂದರ್ಶನ]
ಚುನಾವಣೆಗೆ ಸ್ಪರ್ಧಿಸಿ ಶಾಸಕ, ಸಂಸದನಾಗಬೇಕು ಎಂಬ ಆಸೆ ನನಗಿಲ್ಲ. ಆದರೆ, ವ್ಯಾಪಕ ರಾಜಕೀಯ ಆಂದೋಲನ ಹಾಗೂ ಜನಜಾಗೃತಿ ಆಗಬೇಕಿದ್ದು, ಜನರ, ರಾಜ್ಯದ ಹಾಗೂ ದೇಶದ ಹಿತದೃಷ್ಟಿಯಿಂದ ಒಳ್ಳೆಯ ವ್ಯಕ್ತಿಗಳು ಅಧಿಕಾರ ನಡೆಸುವುದು ಸೂಕ್ತ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಎಸ್.ಆರ್.ಹಿರೇಮಠ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು. ನಂತರ ಪಕ್ಷ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದೆ. ಈ ಬಗ್ಗೆ ಹಿರೇಮಠ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.
ಸಿಎಂರಿಂದ ಉತ್ತರ ಬಂದಿಲ್ಲ : ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ನ ಪ್ರತಿಯನ್ನು ಮುಖ್ಯಮಂತ್ರಿಗೆ ಈಗಾಗಲೇ ಕಳುಹಿಸಿದ್ದೇನೆ. ಆದರೆ, ಅವರಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಓಲೈಸುತ್ತಿರುವಂತಿದೆ ಎಂದು ಹಿರೇಮಠ ಆರೋಪಿಸಿದ್ದಾರೆ. [ ಸಿಎಂ ಕೈ ತಲುಪಿದ ಡಿಕೆಶಿ ಚಾರ್ಚ್ ಶೀಟ್]