ಸಿದ್ಧಾರೂಢ ಸ್ವಾಮಿ ರಥೋತ್ಸವ: ಪ್ರಯಾಣಿಕರಿಗೆ ವಿಶೇಷ ಬಸ್ ಸೌಲಭ್ಯ!
ಧಾರವಾಡದ ಜನರಿಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ಹುಬ್ಬಳ್ಳಿ - ಧಾರವಾಡದಿಂದ ವಿವಿಧ ಭಾಗಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಡಲಾಗಿದೆ. ಮಹಾ ಶಿವರಾತ್ರಿಯ ಪ್ರಯುಕ್ತ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯ ರಥೋತ್ಸವದಲ್ಲಿ ಭಾಗವಹಿಸಿ ಹಿಂದಿರುಗುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರವರಿ 27ರಂದು ರಾತ್ರಿ ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಇದರಿಂದ ಈ ಭಾಗದಿಂದ ವಿವಿಧ ಊರುಗಳಿಗೆ ಪ್ರಯಾಣಿಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಪ್ರತಿ ವರ್ಷ ಮಹಾ ಶಿವರಾತ್ರಿ ಅವಧಿಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಸನ್ನಿಧಿಯಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶ್ರೀ ಗಳ ರಥೋತ್ಸವದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಸುತ್ತ ಮುತ್ತಲಿನ ಊರುಗಳಲ್ಲದೆ, ಗೋವಾ, ಶಿವಮೊಗ್ಗ, ದಾವಣಗೆರೆ,ರಾಣಿಬೆನ್ನೂರು,ಕೊಪ್ಪಳ, ಹೊಸಪೇಟೆ, ಕುಷ್ಟಗಿ, ಗಂಗಾವತಿ, ರಾಯಚೂರು, ಸಿಂಧನೂರು, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬಹುದೆಂದು ನಿರೀಕ್ಷಿಸಲಾಗಿದೆ.

ಸಾರ್ವಜನಿಕರ ಬೇಡಿಕೆಯ ಮೇರೆಗೆ ಫೆಬ್ರವರಿ 27 ರಂದು ಗುರುವಾರ ಶ್ರೀಗಳ ರಥೋತ್ಸವದ ನಂತರ ಭಕ್ತಾದಿಗಳು ತಮ್ಮ ಊರುಗಳಿಗೆ ಹಿಂದಿರುಗಲು ಅನುಕೂಲವಾಗುವಂತೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಬಸ್ ಗಳು ಹೊಸೂರು ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹೊಸೂರು ಬಸ್ ನಿಲ್ದಾಣ: ಗದಗ, ಕೊಪ್ಪಳ, ಗಂಗಾವತಿ,ಹೊಸಪೇಟೆ, ಲಿಂಗಸುಗೂರು, ರಾಯಚೂರು, ಸಿಂಧನೂರು,ಬಳ್ಳಾರಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಇಲಕಲ್ ಮತ್ತಿತರ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೋಗುವ ಬಸ್ ಗಳು ಈ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಗೋಕುಲ ರಸ್ತೆ ಬಸ್ ನಿಲ್ದಾಣ: ಪಣಜಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಶಿವಮೊಗ್ಗ ಕಡೆಗೆ ಹೋಗುವ ಬಸ್ ಗಳು ಈ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹೆಚ್ಚಿನ ಮಾಹಿತಿಗಾಗಿ ಬಸ್ ನಿಲ್ದಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ. ಇನ್ನು ಹೊಸೂರು ಬಸ್ ನಿಲ್ದಾಣ : 7760991685 / 7760991662 ಗೋಕುಲ ರಸ್ತೆ ಬಸ್ ನಿಲ್ದಾಣ: 77601682 ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.
ಸಿದ್ಧಾರೂಢ ಸ್ವಾಮಿ ರಥೋತ್ಸವ: ಈ ವರ್ಷ ಶ್ರೀ ಸಿದ್ಧಾರೂಢ ಸ್ವಾಮಿಯ ರಥೋತ್ಸವವು ಫೆಬ್ರವರಿ 27 ರಂದು ಗುರುವಾರ ಸಂಜೆ 5-30 ಗಂಟೆಗೆ ಜರುಗಲಿದೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಈ ರಥೋತ್ಸವದಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಸೇರುತ್ತಾರೆ. ತೆಪ್ಪೋತ್ಸವವನ್ನು ನೋಡುವುದಕ್ಕೆ ಸುತ್ತಲೂ ಸಾವಿರಾರು ಜನ ನರೆದಿರುತ್ತಾರೆ. ರಥೋತ್ಸವದ ಸಮಯದಲ್ಲಿ ಓಂ..ನಮಃ ಶಿವಾಯ ಎನ್ನುವ ನಾದ ಮೊಳಗುತ್ತಿರುತ್ತದೆ. ಇನ್ನು ಅದ್ಧೂರಿ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.












Click it and Unblock the Notifications