ಧಾರವಾಡ ಎಸ್ಡಿಎಂ ಕೊರೊನಾ ಸ್ಫೋಟ: ಮತ್ತೆ 77 ಜನರಿಗೆ ಸೋಂಕು
ಧಾರವಾಡ, ನವೆಂಬರ್ 27: ಕೆಲ ದಿನಗಳಿಂದ ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹೊಸ ತಳಿ ಪತ್ತೆಯಾಗಿದ್ದು, ಕೊರೊನಾ ಡೆಲ್ಟಾ ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಇದೀಗ ಹೊಸದಾಗಿ ಒಮಿಕ್ರೋನ್ ತಳಿ ವೇಗವಾಗಿ ಹರಡುತ್ತಿದೆ.
ಈ ನಡುವೆಯೇ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ 77 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಶನಿವಾರ ಬೆಳಗ್ಗೆಯವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 281 ತಲುಪಿವೆ.
ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮೊದಲು ಇಬ್ಬರು ವಿದ್ಯಾರ್ಥಿಗಳಿಗೆ ರೋಗಲಕ್ಷಣ ಕಂಡುಬಂದ ನಂತರ, ಕಾಲೇಜು ಆಡಳಿತವು ನವೆಂಬರ್ 24ರಂದು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪರೀಕ್ಷೆಯನ್ನು ಪ್ರಾರಂಭಿಸಿತು. ಆ ಬಳಿಕ ಅನೇಕ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ನಂತರ ಧಾರವಾಡ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಸೋಂಕಿತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಾಗುತ್ತಿದೆ.

ಒಟ್ಟು 281 ಕೊರೊನಾ ಸೋಂಕಿತರಲ್ಲಿ 275 ಜನರಿಗೆ ರೋಗಲಕ್ಷಣಗಳಿಲ್ಲದ ಮತ್ತು ಕೇವಲ ಆರು ಸೌಮ್ಯ ರೋಗಲಕ್ಷಣಗಳು ಕಂಡುಬಂದಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಸೋಂಕಿತ ವಿದ್ಯಾರ್ಥಿಗಳಿಗೆ ಎಸ್ಡಿಎಂ ಕಾಲೇಜು ಆವರಣದಲ್ಲಿರುವ ಎರಡು ಹಾಸ್ಟೆಲ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ತೀವ್ರತರವಾದ ರೋಗಲಕ್ಷಣಗಳನ್ನು ಕಂಡುಬಂದರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಧಾರವಾಡ ಜಿಲ್ಲಾಡಳಿತ ಸಿದ್ಧವಾಗಿದೆ.
ಶನಿವಾರ ಬೆಳಗ್ಗೆ ತನಕ 1500ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳು ಪೂರ್ಣಗೊಂಡಿದ್ದು, 1822 ಜನರ ಕೊರೊನಾ ಪರೀಕ್ಷಾ ಫಲಿತಾಂಶ ಬಾಕಿ ಉಳಿದಿವೆ. ಶನಿವಾರ ಸಂಜೆ ಅಥವಾ ಭಾನುವಾರ ಬೆಳಗ್ಗೆ ಬರುವ ನಿರೀಕ್ಷೆಯಿದೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಸ್ಡಿಎಂ ಕಾಲೇಜಿನ ಕೋವಿಡ್ ಸ್ಫೋಟ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿದ್ದು, ಸೋಂಕಿತ ರೋಗಿಗಳಿಗೆ ಯಾವುದೇ ತೀವ್ರ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಅವರು ಎಂಟು ಆಂಬ್ಯುಲೆನ್ಸ್ಗಳನ್ನು ಮತ್ತು ಅಗತ್ಯವಿರುವ ಸಿಬ್ಬಂದಿ ಮತ್ತು ವೈದ್ಯರನ್ನು ನಿಯೋಜಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಸಂಪನ್ಮೂಲಗಳಿದ್ದು, ಆಸ್ಪತ್ರೆ ಮತ್ತು ಕಾಲೇಜು ಆವರಣದ ಹೊರಗೆ ಹರಡುವುದನ್ನು ತಡೆಯಲು ಜಿಲ್ಲಾಧಿಕಾರಿ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾದ ಕೂಡಲೇ, ಧಾರವಾಡ ಜಿಲ್ಲಾಡಳಿತವು ಆಸ್ಪತ್ರೆಯ ಹೊರರೋಗಿ ವಿಭಾಗವನ್ನು (ಒಪಿಡಿ) ಮುಚ್ಚಿದೆ. ಒಳರೋಗಿಗಳ ಸಂದರ್ಶಕರನ್ನು ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸಲು ಅನುಮತಿ ನೀಲ್ಲ. ಹೊರಗಿನವರು ಸಹ ಆಸ್ಪತ್ರೆಗೆ ಪ್ರವೇಶಿಸದಂತೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೋವಿಡ್ ಸೋಂಕಿನಿಂದ ಚೇತರಿಕೆಯಾಗಿ ಬಿಡುಗಡೆಯಾಗುತ್ತಿರುವ ರೋಗಿಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನೀಡಲು ಮತ್ತು ಡಿಸ್ಚಾರ್ಜ್ ಆದ ನಂತರ ಏಳು ದಿನಗಳವರೆಗೆ ಮನೆಯಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳಲು ಸೂಚಿಸಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಲಸಿಕೆ, ಮಾಸ್ಕ್ ಕಡ್ಡಾಯ ಎಂದ ಸಚಿವ ಸುಧಾಕರ್
"45 ಲಕ್ಷ ಜನ ಇನ್ನೂ 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಅವಧಿ ಮುಗಿದಿದ್ದರೂ ಕೆಲವರು ಲಸಿಕೆಯನ್ನು ಪಡೆದಿಲ್ಲ. ಉದಾಸೀನ ಮಾಡದೆ ಕೋವಿಡ್ ಲಸಿಕೆಯನ್ನು ಪಡೆಯಬೇಕು. ಉದಾಸೀನ ಮಾಡಿದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಲಸಿಕೆ ಪಡೆಯದವರು ತಕ್ಷಣವೇ ಪಡೆಯಬೇಕೆಂದು," ಎಂದು ಬೆಂಗಳೂರಿನಲ್ಲಿ ಸಚಿವ ಡಾ. ಸುಧಾಕರ್ ಮನವಿ ಮಾಡಿದರು.

"ರೂಪಾಂತರಿ ವೈರಸ್ ಬರುತ್ತಿರುವ ಹಿನ್ನೆಲೆ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ನಾವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಲಸಿಕೆ ನೀಡಿದ್ದೇವೆ. ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕು ಸೋಲಿಸಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು," ತಿಳಿಸಿದರು.
"ರೂಪಾಂತರಿ ಕೋವಿಡ್-19 ಸೋಂಕು ಬಹಳ ವೇಗವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಹೊಸ ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಶುಕ್ರವಾರ ಇದೇ ವಿಚಾರವಾಗಿ ಸಭೆ ಮಾಡಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬಂದರೆ ವಿಮಾನ ನಿಲ್ದಾಣದಲ್ಲೇ ಟೆಸ್ಟ್ ಮಾಡಲಾಗುತ್ತದೆ," ಎಂದು ಹೇಳಿದ್ದಾರೆ.
"ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಂದು ವಾರದ ಬಳಿಕ ಮತ್ತೊಂದು ಟೆಸ್ಟ್ ಮಾಡುತ್ತೇವೆ," ಎಂದು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೂ ಕೊರೊನಾ ಟೆಸ್ಟ್ ನಡೆಸಲಾಗಿದೆ. ಜಿನೋಮಿಕ್ ಸೀಕ್ವೆನ್ಸ್ ಟೆಸ್ಟಿಂಗ್ಗೆ ಸ್ಯಾಂಪಲ್ ಕಳಿಸಿದ್ದೇವೆ. ಟೆಸ್ಟ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಗಂಭೀರ ಸಮಸ್ಯೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications