ಮುಸ್ಲಿಮರ ಮೀಸಲಾತಿ ರದ್ದು ಮಾಡಿ ಅದನ್ನು ಪಂಚಮಸಾಲಿಗಳಿಗೆ ಕೊಡಿ: ಶಾಸಕ ಅರವಿಂದ್ ಬೆಲ್ಲದ ಆಗ್ರಹ
ಧಾರವಾಡ, ಅಕ್ಟೋಬರ್ 11 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಘೋಷಣೆ ಮಾಡಿದೆ. ಈ ಬಗ್ಗೆ ಶಾಸಕ ಅರವಿಂದ್ ಬೆಲ್ಲದ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಿಎಂ ಬೊಮ್ಮಾಯಿ ಅವರಿಗೆ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಮೀಸಲಾತಿ ಹೆಚ್ಚಿಸುವಂತೆ ಬಹು ವರ್ಷಗಳ ಬೇಡಿಕೆಗೆ ನಮ್ಮ ಸರ್ಕಾರ ಪೂರಕವಾಗಿ ಸ್ಪಂದಿಸಿ, ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ಓಬಿಸಿ ಸಮುದಾಯದಲ್ಲಿ ಹಿಂದುಳಿದ ವರ್ಗಗಳ ಸಾಕಷ್ಟು ಬೇಡಿಕೆಗಳಿವೆ. ಮರಾಠ ಸಮುದಾಯ, ಲಿಂಗಾಯುತ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಬೇಡಿಕೆ ಇಟ್ಟಿವೆ. ಅದೇ ರೀತಿ ಅನೇಕ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಇದನೆಲ್ಲಾ ಗಮನಿಸಬೇಕಾದ ಅವಶ್ಯಕತೆ ಈಗ ಇದೆ," ಎಂದರು.
ಬಿಜೆಪಿಯ ಜನ ಸಂಕಲ್ಪ ಯಾತ್ರೆ ಬಗ್ಗೆ ಗೇಲಿ ಮಾಡಿದ ಪಾದಯಾತ್ರೆ ನಿರತ ಡಿಕೆ ಶಿವಕುಮಾರ್
ಮಾತು ಮುಂದುವರಿಸಿದ ಅರವಿಂದ್ ಬೆಲ್ಲದ್ ಅವರು, " ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮಾಡಿದ ಹಾಗೆ, ಮೀಸಲಾತಿ ಹೆಚ್ಚಳ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಂವಿಧಾನದ ಪ್ರಕಾರ, ಧಾರ್ಮಿಕವಾಗಿ ಯಾರಿಗೂ ಮೀಸಲಾತಿ ಇಲ್ಲ. ಜಾತಿ ಆಧಾರಿತ ಮೀಸಲಾತಿ ಪದ್ಧತಿ ಇದೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿಕೊಂಡು ಬಂದಿದೆ. ಆ ನಿರ್ಣಯವನ್ನು ಸರಿದೂಗಿಸುವ ಸಮಯ ಈಗ ಬಂದಿದೆ," ಎಂದು ಹೇಳಿದ್ದಾರೆ.
"ಇನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ ಮೀಸಲಾತಿಯನ್ನು ತೆಗೆದು, ಅದನ್ನು ಮೀಸಲಾತಿ ವಂಚಿತ ಲಿಂಗಾಯುತ ಪಂಚಮಸಾಲಿಗೆ ನೀಡಬೇಕು. ಮರಾಠರಿಗೆ 2ಎ ಮೀಸಲಾತಿ ನೀಡುವಂತದ್ದು, ಈ ರೀತಿಯ ಕೆಲಸಗಳು ಆಗಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತದೆ. ನಮ್ಮ ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತವಾದ ಸಮಯದಲ್ಲಿ ಪೂರಕವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ," ಎಂದರು.
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಮತ್ತೆ ಕಡೆಗಣನೆ
"ಧರ್ಮ ಆಧಾರಿತ ಮೀಸಲಾತಿ ನಮ್ಮ ಸಂವಿಧಾನದಲ್ಲಿ ಇಲ್ಲ. ಹೀಗಾಗಿ ಧರ್ಮದ ಆಧಾರದಲ್ಲಿ ನೀಡಿರುವ ಮೀಸಲಾತಿಯನ್ನು ಸರಿಪಡಿಸುವ ಅವಶ್ಯಕತೆ ಇದೆ. ನಾನು ಸುಮಾರು ಒಂದೂವರೆ ವರ್ಷಗಳಿಂದ ಇದರ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ಈಗಾಗಲೇ ಈ ವಿಚಾರವನ್ನು ಸಂಬಂಧಪಟ್ಟರವರ ಗಮನಕ್ಕೆ ತಂದಿದ್ದೇನೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ಮಾಡಿರುವ ಮೀಸಲಾತಿ, ಹಿಂದುಳಿದ ವರ್ಗದವರಿಗಾದ ಅನ್ಯಾಯವನ್ನು ಸರಿಪಡಿಸುವ ಕೆಲಸ ಇದು. ಇದು ಯಾರ ಅಜೆಂಡಾ ಕೂಡ ಅಲ್ಲಾ," ಎಂದು ಹೇಳಿದರು.
ಮೀಸಲಾತಿಗೆ ಹೆಚ್ಚಳವಾಗಲು ನಾವು ಕಾರಣ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ಕಾಂಗ್ರೆಸ್ ಅವರು ಅಧಿಕಾರದಲ್ಲಿ ಇದ್ದಾಗಲೂ ಮೀಸಲಾತಿ ಹೆಚ್ಚಳದ ಬೇಡಿಕೆ ಇತ್ತು. ಅವರಿದ್ದಾಗ ಏನು ಮಾಡಲು ಆಗಲಿಲ್ಲ. ಈಗ ನಮ್ಮ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ಇದನ್ನು ಮಾಡಿದಾಗ, ಅದನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಜನರೇನು ಮೂರ್ಖರಲ್ಲ," ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.