ಪೇಡಾ ನಗರಿ ಧಾರವಾಡದಲ್ಲಿ ಆರ್ಭಟಿಸಿದ ವರುಣ
ಧಾರವಾಡ, ಮೇ 17: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಪೇಡಾ ನಗರಿ ಧಾರವಾಡಕ್ಕೆ ಮಂಗಳವಾರ ಮಳೆರಾಯ ತಂಪೇರೆದಿದ್ದಾನೆ. ಮುಂಜಾನೆಯಿಂದಲ್ಲೇ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬಂದಿತ್ತು. ಆದರೆ ಮಧ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದೆ. ಇದರಿಂದಾಗಿ ಕೆಲಕಾಲ ವಾಹನ ಸವಾರರು ಸಂಕಷ್ಟ ಅನುಭವಿಸಿದರು.
ಧಾರವಾಡ ನಗರದ ಜಿಲ್ಲಾಧಿಕಾರಿ ಆವರಣ, ಹೊಸಯಲ್ಲಾಪುರ, ಮಾಳಮಡ್ಡಿ, ತೇಜಸ್ವಿನಗರ, ಕಲ್ಯಾಣ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನೂ ಮಳೆರಾಯನ ಅರ್ಭಟಕ್ಕೆ ಕಚೇರಿ ಕೆಲಸಗಳಿಗೆ ತೆರಳಿದ್ದ ಸಾರ್ವಜನಿಕರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ನಗರದಾದ್ಯಂತ ಇನ್ನೂ ಮೋಡ ಮುಸುಕಿನ ವಾತಾವರಣದ ಜೊತೆಗೆ ತುಂತುರು ಮಳೆ ಮುಂದುವರೆದಿದ್ದು, ಮತ್ತೆ ಸಂಜೆಯೂ ಮಳೆಯಾಗುವ ಸಾಧ್ಯತೆ ಇದೆ. ಮೋಡ ಮುಸುಕಿನ ವಾತಾವರಣ ಮುಂದುವರೆದಿರುವುದರಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ.
ಏಕಾಏಕಿ ಸುರಿದ ಮಳೆ; ಕಳೆದ 4 ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು, ಮಾತ್ರವಲ್ಲದೇ ಅಲ್ಲಲ್ಲಿ ಮಳೆ ಕೂಡ ಆಗಿತ್ತು. ಬೆಳಗ್ಗೆ ಕಚೇರಿ ಮತ್ತು ಕೆಲಸದ ನಿಮಿತ್ತ ಮನೆಯಿಂದ ಆಚೆ ಬಂದ ಅನೇಕರು ಮರಳಿ ಮನೆಗೆ ತೆರಳಲು ಮಳೆ ಅಡ್ಡಿ ಮಾಡಿತು. ಏಕಾಏಕಿ ಜೋರಾದ ಮಳೆ ಸುರಿದ ಪರಿಣಾಮ ವಾಹನಗಳ ಸಂಚಾರ ಕಡಿಮೆಯಾಯಿತು. ಮಳೆ ನಿಲ್ಲುವವರೆಗೂ ಅಂಗಡಿ, ಬಸ್ ನಿಲ್ದಾಣದ ಬಳಿ ಜನರು ನಿಂತರು.
ಪ್ರತಿದಿನ ಕೊರೋನಾ ಪಾಸಿಟಿವ್, ನೆಗೆಟಿವ್ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಮಂದಿ ಇದೀಗ ಮಳೆಯ ಬಗ್ಗೆ ಮಾತನಾಡುವಂತಾಗಿದೆ. ಕಳೆದ ರಾತ್ರಿ ಬಿರುಗಾಳಿ ಸಹಿತ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.
ಧಾರವಾಡದಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತವರಣವು ತಂಪಾದ ಅನುಭವ ನೀಡಿತು. ಸಂಜೆ ವೇಳೆಗೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಯು ಜನರಿಗೆ ತಂಪು ನೀಡಿತು.