ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ?- ಶಾಸಕ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ, ಅಕ್ಟೋಬರ್ 26: ರಾಜಕಾರಣಿಗಳು ಸೇರಿದಂತೆ ಅನೇಕರು ಹುಲಿ ಉಗುರು ಧರಿಸುವ ಕುರಿತು ತಾರತಮ್ಯ ಕ್ರಮ ಬೇಡ. ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ? ಮಾಡುವುದಾದರೆ ಎಲ್ಲರ ಬಗ್ಗೆಯೂ ವಿಚಾರಣೆ ಆಗಬೇಕು ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಜನರ ಕೊರಳಲ್ಲಿ ಹುಲಿ ಉಗುರು ಇದೆ. ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ? ಯಾವತ್ತಾದರೂ ನೋಡಿದ್ದೀರಾ..? ಮಾಡುವುದಾದರೆ ಎಲ್ಲರ ಬಗ್ಗೆಯೂ ವಿಚಾರಣೆ ಆಗಬೇಕು. ಯಾರಿಗೂ ಕೂಡ ಅನ್ಯಾಯ ಆಗಬಾರದು. ಎಲ್ಲರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣದ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಇದು ಇವತ್ತಿಂದಲ್ಲ, ಅದು ಒರಿಜಿನಲ್ಲಾ, ಡುಬ್ಲಿಕೇಟ್ ಎಂದು ಅವರೇ ಹೇಳುವುದಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು. ಯಾರೋ ಒಬ್ಬರು ಹಿಡಿದು ಇನ್ನೊಬ್ಬರನ್ನು ಬಿಟ್ಟರು ಎನ್ನುವ ಹಾಗೆ ಆಗಬಾರದು ಎಂದರು.
ಕನಕಪುರ ಬೆಂಗಳೂರಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಅವರ ಅವರ ಜಮೀನಿಗೆ ಬೆಲೆ ಬರಿಸುವುದು ಮುಖ್ಯ ಅಲ್ಲ. ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಲು ಮುಂದಾಗಬೇಕು ಅದನ್ನ ಬಿಟ್ಟು ನನ್ನ ಕ್ಷೇತ್ರಕ್ಕೆ ಬೆಲೆ ಬರುತ್ತದೆ ಎನ್ನುವುದಲ್ಲ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ಗೆ ವಿರುದ್ಧ ಗುಡುಗಿದರು.
ಭೂಮಿಗೆ ಬೆಲೆ ಇದ್ದೆ ಇರುತ್ತದೆ. ಹುಬ್ಬಳ್ಳಿಯಲ್ಲಿದ್ದರೂ ಬೆಲೆ ಇರುತ್ತದೆ. ಬೆಂಗಳೂರಿನಲ್ಲಿದ್ದರೂ ಬೆಲೆ ಇರುತ್ತದೆ. ನಾವು ಯಾವುದಾದರೂ ಕ್ಷೇತ್ರವನ್ನು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡುವುದಾದರೆ ಅಲ್ಲಿನ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡಬೇಕು. ಬೆಂಗಳೂರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬಹಳಷ್ಟು ಸಮಸ್ಯೆಗಳು ಆಗುತ್ತಿವೆ. ಈ ರೀತಿ ತಕ್ಷಣ ಸೇರ್ಪಡೆ ಕೆಲಸ ಮಾಡಬಾರದು ಎಂದರು.
ಈ ವಿಚಾರದಲ್ಲಿ ಸಂಬಂಧಪಟ್ಟ ಸಮಿತಿಗಳಿರುತ್ತದೆ, ಸಾಧಕ- ಬಾಧಕಗಳೆಲ್ಲವನ್ನು ನೋಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ತರಾತುರಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸಮರ್ಥನೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಹೇಳಿಕೆ ಸಮರ್ಥನೆ ಮಾಡುವುದನ್ನು ಬಿಟ್ಟು ಜಗದೀಶ್ ಶೆಟ್ಟರ್ ಅವರಿಗೆ ಬೇರೆ ಏನು ದಾರಿ ಇಲ್ಲ, ಅವರು ಹೇಳಿದ್ದಕ್ಕೆಲ್ಲ ಈಗ ಹೂ ಅನ್ನಲೇಬೇಕು ಇದು ಪೂರ್ವ ಅಲ್ಲ ಪಶ್ಚಿಮ ಅಂದ್ರೆ ಅದಕ್ಕೂ ಹೂ ಅಂತಾರೆ ಎಂದು ವ್ಯಂಗವಾಡಿದರು.












Click it and Unblock the Notifications