ಗುಜರಾತ್ ಚುನಾವಣೆ ಕರ್ನಾಟಕದ ಚುನಾವಣೆ ಮೇಲೂ ಪ್ರಭಾವ ಬೀರುತ್ತದೆ: ಅರವಿಂದ ಬೆಲ್ಲದ
ಧಾರವಾಡ, ಡಿಸೆಂಬರ್ 6: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪರವಾಗಿಯೇ ಇವೆ. ಈ ರಾಜ್ಯಗಳ ಫಲಿತಾಂಶದ ಪ್ರಭಾವ ಕರ್ನಾಟಕದ ಚುನಾವಣೆ ಮೇಲೂ ಬೀರಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಗುಜರಾತ್ ಚುನಾವಣೆ ಏನಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ಈಗಾಗಲೇ ಸಮೀಕ್ಷೆಗಳು ಬಿಜೆಪಿ ಪರವಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಗುಜರಾತ್ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಅದು ಕರ್ನಾಟಕದ ಚುನಾವಣೆ ಮೇಲೂ ಪ್ರಭಾವ ಬೀರಲಿದೆ. ಗುಜರಾತ್ ಹಾಗೂ ಇತರ ರಾಜ್ಯಗಳ ಚುನಾವಣಾ ಫಲಿತಾಂಶ ನಮಗೆ ಪೂರಕ ವಾತಾವರಣ ನಿರ್ಮಿಸುತ್ತವೆ ಎಂದರು.
ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಶ್ವನಾಥ ಅವರು ಬಹಳ ಹಿರಿಯ ರಾಜಕಾರಣಿ. ಅವರಿಗೆ ಎಲ್ಲರೂ ವೈಯಕ್ತಿಕವಾಗಿ ಪರಿಚಯವಿದೆ. ಹೀಗಾಗಿ ಅವರು ವೈಯಕ್ತಿಕ ಕೆಲಸದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರಬಹುದು ಎಂದರು.

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಹೊಸ ಮುಖ್ಯಮಂತ್ರಿ ಬಂದಾಗಿನಿಂದ ಈ ರೀತಿಯ ವಿವಾದ ಎಬ್ಬಿಸುವ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಇನ್ನು ಬೆಳಗಾವಿಯಲ್ಲಿರುವುದು ಅಲ್ಲಿರುವುದು ಶಿವಸೇನಾ ಮುಖ್ಯಮಂತ್ರಿ. ಆಡಳಿತಕ್ಕೆ ಬಿಜೆಪಿ ಬೆಂಬಲ ಇದ್ದರೂ ಆಡಳಿತ ಮಾಡಲು ಹಾಗೂ ಗದ್ದಲ ಮಾಡಲು ನಮ್ಮ ಬೆಂಬಲ ಇಲ್ಲ. ಅದಕ್ಕೆ ನಾವು ಮಹತ್ವ ಕೊಟ್ಟರೆ ಕರ್ನಾಟಕದಲ್ಲಿರುವ ಎಂಇಎಸ್ನವರಿಗೆ ಶಕ್ತಿ ತುಂಬಿದಂತಾಗುತ್ತದೆ. ಚುನಾವಣೆ ಬಂದಾಗ ಎಂಇಎಸ್ನವರು ಇಂತಹ ಗದ್ದಲ ಮಾಡುತ್ತಾರೆ ಎಂದು ಹೇಳಿದರು.












Click it and Unblock the Notifications