ಪ್ರತಾಪ್ ಸಿಂಹರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ವಿನಯ್ ಕುಲಕರ್ಣಿ
ಧಾರವಾಡ, ಡಿಸೆಂಬರ್ 04 : ಪ್ರತಾಪ್ ಸಿಂಹ ಹನುಮ ಜಯಂತಿ ವಿವಾದ ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷದ ನಾಯಕರಿಗೆ ಪರಸ್ಪರ ಮೂದಲಿಸಿಕೊಳ್ಳಲು ವಿಷಯ ಒದಗಿಸಿದೆ.
ನಿನ್ನೆಯಿಂದಲೂ (ಡಿಸೆಂಬರ್ 03) ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿರುವ ಉಭಯ ಪಕ್ಷಗಳ ನಾಯಕರ ಪಟ್ಟಿಗೆ ಇಂದು (ಡಿಸೆಂಬರ್ 04) ಗಣಿ ಸಚಿವ ವಿನಯ್ ಕುಲಕರ್ಣಿ ಸೇರ್ಪಡೆಗೊಂಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು "ಪ್ರತಾಪ್ ಸಿಂಹ ಅವರಿಗೆ ಒಳ್ಳೆಯ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ಒಳಿತು' ಎನ್ನುವ ಮೂಲಕ ಪ್ರತಾಪ್ ಸಿಂಹ ಅವರನ್ನು ಹುಚ್ಚನಿಗೆ ಹೋಲಿಸಿದ್ದಾರೆ.
"ಪ್ರತಾಪ್ ಸಿಂಹ್ ಈ ಹಿಂದೆ ಚನ್ನಮ್ಮ, ಓಬವ್ವ ಬಗ್ಗೆ ಮಾತಾಡಿದ್ರು ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ ಬಿಜೆಪಿಯವರು ಪ್ರತಾಪ್ ಸಿಂಹ್ ವಿರುದ್ಧ ಯಾಕೆ ಕ್ರಮ ಕೈಗೊಳ್ತಾ ಇಲ್ಲ ಎಂದು ಪ್ರಶ್ನಿಸಿದ ಅವರು. ಇತಿಹಾಸದ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಮಾತಾಡಿದಾಗ ಇವರಿಗೆ ದೇಶ ಪ್ರೇಮ ನೆನಪಿಗೆ ಬರೊಲ್ಲ, ಎಂದು ಅವರು ಬಿಜೆಪಿ ಮೇಲೆ ಹರಿಹಾಯ್ದರು.
ಆದರೆ ಪ್ರತಾಪ್ ಸಿಂಹ ಅವರು "ಕಿತ್ತೂರು ಚೆನ್ನಮ್ಮ, ಓಬವ್ವ ಅವರ ಹಾಕಲಾಗಿದ್ದ ಪೋಸ್ಟ್ಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರ ಮೇಲೂ ಹರಿಹಾಯ್ದ ವಿನಯ್ ಕುಲಕರ್ಣಿ ಪ್ರಹ್ಲಾದ ಜೋಶಿ ಬರಲಿರುವ ಚುನಾವಣೆ ಮುಂದಿಟ್ಟುಕೊಂಡು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಚುನಾವಣೆ ಸಮೀಪ ಇದ್ದರಿಂದ ಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಜೊತೆ ನನ್ನ ಹೆಸರು ತಳಕು ಹಾಕಲು ನೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಪ್ರಹ್ಲಾದ ಜೋಷಿ ಅವರಿಗೆ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದ ಅವರು ಧಾರವಾಡ ಜಿಲ್ಲೆಯಲ್ಲಿ 100 ಕೋಟಿ ಅನುದಾನ ಹಾಗೆ ಇದೆ. ಆ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ನನ್ನ ವಿರುದ್ಧ ಷಡ್ಯಂತ್ರ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿನಯ್ ಕುಲಕರ್ಣಿ, ಬಿಜೆಪಿಗೆ ಲಿಂಗಾಯತರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. ಬಿಜೆಪಿಯಲ್ಲಿ 9 ಲಿಂಗಾಯತ ಸಂಸದರು ಇದ್ದಾರೆ ಅವರಲ್ಲಿ ಒಬ್ಬರನ್ನಾದರೂ ಕೇಂದ್ರದಲ್ಲಿ ಸಚಿವರನ್ನಾಗಿಸಬೇಕಿತ್ತು ಎಂದರು.ಡಿಸೆಂಬರ್ 10 ಕ್ಕೆ ವಿಜಯಪುರ ಜಿಲ್ಲೆಯಲ್ಲಿ ಬ್ರಹತ್ ಲಿಂಗಾಯತ ಸಮಾವೇಶ ನಡೆಸಲಾಗುವುದು. ಲಿಂಗಾಯತ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಚುನಾವಣೆ ಬಗ್ಗೆ ಮಾತನಾಡಿದ ಅವರು ಗ್ರಾಮೀಣ ಕ್ಷೇತ್ರದಿಂದ ಚುನಾವಣೆ ನಿಲ್ಲುತ್ತೆನೆ, ಕ್ಷೇತ್ರ ಬಿಟ್ಟು ಕೊಡು ಎಂದರೆ ಅದಕ್ಕೂ ಸಿದ್ದನಾಗಿದ್ದೇನೆ, ಒಟ್ಟಿನಲ್ಲಿ ಹೈಕಮಾಂಡ್ ಆದೇಶದಂತೆ ನಡೆಯುತ್ತೇನೆ ಎಂದರು.