ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭ
ಹುಬ್ಬಳ್ಳಿ, ಅಕ್ಟೋಬರ್ 18 : ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನೀಲಕಂಠಪ್ಪ ಅಸೂಟಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಧಾರವಾಡ ಹಾಲು ಒಕ್ಕೂಟ ಹೊಂದಿದೆ. 2014ರ ಮೇ ತಿಂಗಳಿನಲ್ಲಿ ನೀಲಕಂಠಪ್ಪ ಅಸೂಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
'ನಾನು ರಾಜೀನಾಮೆ ನೀಡಿದ್ದರ ಹಿಂದೆ ಯಾವುದೇ ರಾಜಕೀಯವಿಲ್ಲ' ಎಂದು ನೀಲಕಂಠಪ್ಪ ಅಸೂಟಿ ಸ್ಪಷ್ಟಪಡಿಸಿದ್ದಾರೆ. ಅಸೂಟಿ ಅವರು ರಾಜೀನಾಮೆ ನೀಡಿದ ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ.

ಸೋಮವಾರ ಹಾಲು ಒಕ್ಕೂಟದ ಅಧಿಕಾರಿಗಳನ್ನು ಭೇಟಿಯಾಗಿ ನೀಲಕಂಠಪ್ಪ ಅಸೂಟಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ವೈಯಕ್ತಿಕ ಕಾರಣ ಎಂದು ನಮೂದಿಸಿದ್ದಾರೆ. ಆದರೆ, ನಿರ್ವಾಹಕ ನಿರ್ದೇಶಕರು ಇಲ್ಲದ ಕಾರಣ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.
ಅಧ್ಯಕ್ಷ ಸ್ಥಾನಕ್ಕೆ ಗಂಗಪ್ಪ ಮೊರಬದ ಹಾಗೂ ಎಚ್.ಜಿ.ಹಿರೇಗೌಡರ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹುಬ್ಬಳ್ಳಿ ಕುಂದಗೋಳ ತಾಲೂಕಿನ ಗಂಗಪ್ಪ ಮೊರಬದ ಹಾಗೂ ಗದಗ-ನರಗುಂದ ಕ್ಷೇತ್ರದಿಂದ ಹನುಮಂತಗೌಡ ಹಿರೇಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಹಾಲು ಉತ್ಪಾದನಾ ಘಟಕದಲ್ಲಿ ಹಾಲಿನ ಪುಡಿ ನಿರ್ಮಾಣ ಘಟಕ ಸ್ಥಾಪನೆ ಪೂರ್ಣಗೊಳಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಅಸೂಟಿ ಅವರು ತಮ್ಮ ಕೆಲ ಆಪ್ತರೊಂದಿಗೆ ಹೇಳಿ ಕೊಂಡಿದ್ದರು. ಕಳೆದ ವರ್ಷ ಈ ಘಟಕದ ಶಂಕುಸ್ಥಾಪನೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟಕ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಹಣ ಬಿಡುಗಡೆಯಾಗಿಲ್ಲ.
ಪಕ್ಷದ ಆಂತರಿಕ ಒಪ್ಪಂದದಂತೆ ಎರಡೂವರೆ ವರ್ಷಗಳ ನಂತರ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಕುರಿತು ಮಾತುಕತೆ ನಡೆದಿತ್ತು. ಆದರೆ, ಒಪ್ಪಂದದ ಅವಧಿ ಮುಗಿದ ಮೇಲೂ ಒಂದು ವರ್ಷ ಹೆಚ್ಚುವರಿಯಾಗಿ ಅಸೂಟಿ ಮುಂದುವರಿದಿದ್ದರು. ಆದ್ದರಿಂದ, ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.












Click it and Unblock the Notifications