ಪಿಓಪಿ ವಿಗ್ರಹ ತ್ಯಜಿಸೋಣ; ಪರಿಸರ ಸ್ನೇಹಿ ಗಣೇಶೋತ್ಸವ ಮಾಡೋಣ
ಧಾರವಾಡ, ಆಗಸ್ಟ್ 23 : ಪ್ರತಿ ವರ್ಷದಂತೆ ಈ ವರ್ಷವೂ ಆನೆ ಸೊಂಡಿಲಿನ ಗಣಪನನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರದಲ್ಲಿದ್ದಾರೆ. ಡೊಳ್ಳು ಹೊಟ್ಟೆ ಗಣಪ ಮಕ್ಕಳಿಗೆ ಹಾಗೂ ಯುವಕರಿಗೆ ಪ್ರಿಯವಾದವ. ಹಾಗಾಗಿ ಅವನ ಬರುವಿಕೆಗೆ ಈಗಾಗಲೇ ತಯಾರಿ ನಡೆದಿದೆ.
ಪರಿಸರಕ್ಕೆ ಅಪಾಯಕಾರಿಯಾದ ಪಿಓಪಿ ಗಣೇಶ ಮೂರ್ತಿಗಳನ್ನು ತ್ಯಜಿಸಿ. ಪರಿಸರ ಸ್ನೇಹಿ ಗಣಪನನ್ನು ಸಂಭ್ರಮದಿಂದ ಬರ ಮಾಡಿಕೊಂಡು, ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ.
ಪರಿಸರ ಮತ್ತು ಜಲಚರಗಳಿಗೆ ಅಪಾಯಕಾರಿಯಲ್ಲದ ಜೇಡಿ ಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ಮನೆಯ ಬಕೆಟ್ ನೀರಿನಲ್ಲಿಯೇ ವಿಸರ್ಜಿಸಿದರೆ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಿದಂತಾಗುತ್ತದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸುವ ಗಣೇಶ ಮೂರ್ತಿಗಳು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತವೆ. ಇವುಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ, ಕರಗುವಾಗ ಅಪಾಯಕಾರಿ ರಾಸಾಯನಿಕಗಳನ್ನು ನೀರಿಗೆ ಬಿಡುತ್ತವೆ....

ಏನಿದು ಪಿಒಪಿ ಗಣೇಶ ಮೂರ್ತಿ?
ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸುವ ಗಣೇಶ ಮೂರ್ತಿಗಳು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತವೆ. ಹೀಗಾಗಿ ಪಿಒಪಿ ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಿದಾಗ ಅದು ಕರಗದೆ ಜಲಮೂಲಗಳು ಕಲುಷಿತಗೊಂಡು ನೀರಿನಲ್ಲಿನ ಜಲಚರಗಳಿಗೂ ಮತ್ತು ಪರಿಸರಕ್ಕೂ ಹಾನಿಯುಂಟು ಮಾಡುತ್ತವೆ.

ಅಪಾಯಕಾರಿಯಾದ ಪಿಒಪಿ ಮೂರ್ತಿ
ಪಿಒಪಿ ಗಣೇಶ ಮೂರ್ತಿಗಳಲ್ಲಿ ಕ್ಯಾಲ್ಸಿಯಂ ಸಲ್ಫೇಟ್ ಅಂಶವಿರುತ್ತದೆ. ಅದಲ್ಲದೆ ವಿಗ್ರಹ ತಯಾರಿಸಲು ಬಳಸುವ ರಾಸಾಯನಿಕ ಬಣ್ಣಗಳು, ಪಾದರಸ, ಕ್ರೋಮಿಯಂ, ಸೀಸದಂಥ ಭಾರ ಲೋಹದ ಅಂಶಗಳು ಪಿಒಪಿ ಮೂರ್ತಿಗಳಲ್ಲಿ ಇರುತ್ತವೆ. ಈ ಅಂಶ ಹೊಂದಿರುವ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದಾಗ ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಭಾರದ ಲೋಹಗಳು ನೀರಿನ ತಳವನ್ನು ಸೇರುತ್ತವೆ.

ಜನರಲ್ಲಿ ಜಾಗೃತಿ ಮೂಡಿಸಬೇಕು
ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ ನೀರಿನಲ್ಲಿ ಕಬ್ಬಿಣದ ಅಂಶ 10 ಪಟ್ಟು ಮತ್ತು ತಾಮ್ರದ ಅಂಶವೂ 20 ಪಟ್ಟು ಜಾಸ್ತಿಯಾಗುತ್ತದೆ. ಹೀಗಾಗಿಯೇ ನೀರು ಕಲುಷಿತಗೊಂಡು ನೀರಿನಲ್ಲಿ ಇರುವ ಜಲಚರಗಳಿಗೆ ಅಪಾಯ ಉಂಟಾಗುತ್ತದೆ. ಪಿಒಪಿ ವಿಗ್ರಹಗಳಿಂದಾಗುವ ಹಾನಿಯ ಕುರಿತು ಜಿಲ್ಲಾಡಳಿತ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಘ ಸಂಸ್ಥೆಗಳು, ಪರಿಸರವಾದಿಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.

ಪರಿಸಕ್ಕೆ ಧಕ್ಕೆ ಆಗುವುದಿಲ್ಲ
ಪಿಓಪಿ ವಿಗ್ರಹ ಬಿಟ್ಟು ಮಣ್ಣಿನಿಂದ ಮಾಡಿದ ನೈಸರ್ಗಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಪೂಜಿಸಿ ಹಬ್ಬ ಆಚರಿಸಿದರೆ ಸಂಭ್ರಮಕ್ಕೆ ಕೊರತೆಯುಂಟಾಗುವುದಿಲ್ಲ ಹಾಗೂ ಪರಿಸರಕ್ಕೂ ಧಕ್ಕೆ ಆಗುವುದಿಲ್ಲ. ಪ್ರಕೃತಿ ವಿರುದ್ಧವಾಗಿ ನಡೆದರೆ ಅದರಿಂದ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಅರಿತು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಸನ್ನದ್ಧರಾಗೋಣ.
ಲೇಖಕರು : ಸ್ಮಿತಾ ಅಂಗಡಿ, ಅಪ್ರೆಂಟಿಸ್ ತರಬೇತಾರ್ಥಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ












Click it and Unblock the Notifications