ಕಾಂಗ್ರೆಸ್ನಲ್ಲಿ ಅವಧಿ ಮುಗಿದಾಗ ನಾಯಕತ್ವ ತ್ಯಜಿಸಬೇಕು; ಜೋಶಿ
ಧಾರವಾಡ, ಆಗಸ್ಟ್, 28: "ಕಾಂಗ್ರೆಸ್ನಲ್ಲಿ ಅವರ ಅವಧಿ ಮುಗಿದಾಗ ನಾಯಕತ್ವ ಬಿಟ್ಟು ಕೊಡಬೇಕು" ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಹೇಳಿದರು.
ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, "ಈಗಾಗಲೇ ಅನೇಕ ಹಿರಿಯರು ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸೇರಿದಂತೆ ಅನೇಕರು ಬಿಟ್ಟು ಹೋಗಿದ್ದಾರೆ. ಇದರಲ್ಲಿ ನಾಯಕತ್ವದ ದುರಂಹಕಾರ ಪರಮಾವಧಿಯಿಂದ ಹಲವಾರು ನಾಯಕರು ರಾಜಿನಾಮೆ ನೀಡುತ್ತಿದ್ದಾರೆ" ಎಂದರು.
"ನಾಯಕತ್ವದ ಅವಧಿ ಮುಗಿದಾಗ ಬಿಟ್ಟು ಕೊಡಬೇಕು ಇದು ಒಂದು ಪಕ್ಷದ ಬೆಳವಣಿಗೆಗೆ ಒಳ್ಳೆಯದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅದು ಆಗುತ್ತಿಲ್ಲ, ಆ ಕಾರಣದಿಂದಾಗಿ ಗುಲಾಂ ನಬಿ ಆಜಾದ್ ಪಕ್ಷ ಬಿಟ್ಟಿದ್ದಾರೆ" ಎಂದು ಹೇಳಿದರು.

ಮುರುಘಾ ಶ್ರೀ ಕುರಿತು ಜೋಶಿ ಪ್ರತಿಕ್ರಿಯೆ; ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಚಿತ್ರದುರ್ಗ ಸ್ವಾಮೀಜಿ ಮೇಲಿನ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈಗಾಗಲೇ ಪ್ರಕರಣದ ತನಿಖೆಯು ನಡೆಯುತ್ತಿದೆ. ಹೀಗಾಗಿ ಹೆಚ್ಚು ಮಾತನಾಡುವ ಅಗತ್ಯ ಇಲ್ಲ. ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ನಾಡಿನ ಒಬ್ಬ ಪ್ರತಿಷ್ಠಿತ ಸ್ವಾಮೀಜಿ ಆಗಿದ್ದಾರೆ. ಸೂಕ್ತವಾದ, ನ್ಯಾಯಯುತವಾದ ತನಿಖೆ ಆಗಬೇಕು. ಅಲ್ಲಿಯವರೆಗೆ ಎಲ್ಲದ್ದಕ್ಕೂ ಪ್ರತಿಕ್ರಿಯೆ ಕೊಡಬೇಕಿಲ್ಲ" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಕುರಿತು ಮಾತನಾಡಿ, "ಬದಲಾವಣೆ ಆಗುತ್ತದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಸಾಮಾನ್ಯವಾಗಿ ಮೂರು ವರ್ಷ ಅವಧಿ ನಮ್ಮಲ್ಲಿ ಇರುತ್ತದೆ. ಆದರೆ ಮೂರು ವರ್ಷದ ಬಳಿಕ ಬದಲಾವಣೆ ಮಾಡಲೇಬೇಕು ಅಂತಿಲ್ಲ. ಕೇವಲ ಮಾಧ್ಯಮಗಳೇ ಬದಲಾವಣೆ ಎಂದು ಹೇಳುತ್ತಿವೆ. ಆದ್ದರಿಂದ ಕಾರಣಿಕ ಹೇಳಿದಂತೆ ಮಾಧ್ಯಮಗಳೇ ಕೊನೆ ದಿನಾಂಕವನ್ನು ಹೇಳುತ್ತಿವೆ. ನಮ್ಮಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ" ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, "ಯಡಿಯೂರಪ್ಪ ಈಗ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ಪಕ್ಷದ ಹಿರಿಯರಲ್ಲೊಬ್ಬರು ಆಗಿದ್ದಾರೆ. ನೇಮಕದ ಹಿನ್ನೆಲೆ ಪ್ರಮುಖ ನಾಯಕರ ಭೇಟಿಗೆ ದೆಹಲಿಗೆ ಹೋಗಿದ್ದರು. ಅದಕ್ಕೆ ವಿಶೇಷ ಅರ್ಥ ಬೇಡ" ಎಂದು ತಿಳಿಸಿದರು.












Click it and Unblock the Notifications