ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸುಧಾ ಮೂರ್ತಿ ನೀಡಿದ ಉಡುಗೊರೆ ಏನು?
ಧಾರವಾಡ, ಸೆಪ್ಟೆಂಬರ್ 26: ಧಾರವಾಡ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ತಡಸಿನಕೊಪ್ಪದ ಹತ್ತಿರ ನಿರ್ಮಾಣಗೊಂಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇಂದು ಲೋಕಾರ್ಪಣೆಗೊಂಡಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಉದ್ಘಾಟಿಸಿದರು.
ರಾಷ್ಟ್ರಪತಿ ಅವರಿಗೆ ಸೀರೆ, ಕೌದಿ ಉಡುಗೊರೆ
ಧಾರವಾಡ ಐಐಐಟಿ ಉದ್ಘಾಟನೆ ವೇಳೆ ರಾಜ್ಯಪಾಲರಿಗೆ ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಇಳಕಲ್ ಸೀರೆಯೊಂದಿಗೆ ಒಂದು ಪುಸ್ತಕ ನೀಡಿ ಸುಧಾ ಮೂರ್ತಿ ಅವರು ಗೌರವ ಸಲ್ಲಿಸಿದರು. ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವರಿಗೆ ಕೌದಿಯನ್ನು ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ, ಹುಬ್ಬಳ್ಳಿ ನನ್ನ ತವರು ಮನೆಯಾಗಿದೆ. ನಾನು ನನ್ನ ತವರಿನ ಜನರ ಮೂಲಕ ನಿಮ್ಮನ್ನ ಸ್ವಾಗತ ಮಾಡುತ್ತೇನೆ. ಹುಬ್ಬಳ್ಳಿ-ಧಾರವಾಡ ನನ್ನ ಸ್ವರ್ಗ ಇದ್ದ ಹಾಗೆ. 7 ವರ್ಷದಿಂದ ಈ ಕಾರ್ಯ ನಿರಂತರ ಆಗುತ್ತಲೇ ಇತ್ತು. ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ರಾಷ್ಟ್ರಪತಿಗಳು ಉದ್ಘಾಟಿಸಿದ್ದು, ತುಂಬಾ ಸಂತೋಷವಾಗುತ್ತಿದೆ ಎಂದರು.
ದೇಶದ ಅತ್ಯುನ್ನತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದರು. ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೌರಸನ್ಮಾನ ನೀಡಿ ಗೌರವಿಸಲಾಯಿತು. ಪೌರ ಸನ್ಮಾನ ಸ್ವೀಕರಿಸಿ ನೇರವಾಗಿ ಐಐಐಟಿ ಕಟ್ಟಡ ಉದ್ಘಾಟನೆಗೆ ಬಂದ ಮುರ್ಮು ಅವರಿಗೆ ಸಂಸ್ಥೆಯ ಉಸ್ತುವಾರಿ ಅಧ್ಯಕ್ಷೆ ಸುಧಾಮೂರ್ತಿ ಆತ್ಮೀಯವಾಗಿ ಬರಮಾಡಿಕೊಂಡರು. ಕಟ್ಟಡ ವೀಕ್ಷಿಸಿದ ರಾಷ್ಟ್ರಪತಿ ಅಲ್ಲಿಯೇ ಮಧ್ಯಾಹ್ನದ ಊಟವನ್ನು ಸವಿದರು.

ಉತ್ತರ ಕರ್ನಾಟಕದ ಊಟ ಸವಿದ ದ್ರೌಪದಿ ಮುರ್ಮು
ರಾಷ್ಟ್ರಪತಿಯವರಿಗೆ ಉತ್ತರ ಕರ್ನಾಟಕ ಶೈಲಿಯ ಗೋದಿ ಹುಗ್ಗಿ, ರೊಟ್ಟಿ ಚಟ್ನಿ, ಎಣಗಾಯಿ ಪಲ್ಯ, ಶೇಂಗಾ ಚಟ್ನಿ ಊಟ ಬಡಿಸಲಾಯಿತು. ನಂತರ ಸಭಾ ವೇದಿಕೆಗೆ ಬಂದ ದ್ರೌಪದಿ ಮುರ್ಮು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸಿದರು. ವಿಶ್ವದ ನಕಾಶೆಯಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ವಿಜ್ಞಾನಿಗಳು, ದೇಶದ ಕೀರ್ತಿಯನ್ನು ಮುಗಿಲೆತ್ತರದಲ್ಲಿ ಮಿಂಚುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದೆ ವೇಳೆ ರಾಷ್ಟ್ರಪತಿಗಳಿಗೆ ಸಂಸ್ಥೆಯ ಉಸ್ತುವಾರಿ ಅಧ್ಯಕ್ಷೆ ಸುಧಾಮೂರ್ತಿ ಮೂರು ಸಾವಿರ ಹೊಲಿಗೆಗಳುಳ್ಳ ಕೌದಿಯನ್ನು ನೀಡಿದರು. ಜೊತೆಗೆ ಒಂದು ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

ಐಐಐಟಿ ಸಂಸ್ಥೆಗೆ ಕರ್ನಾಟಕ ಸರ್ಕಾರ 60 ಎಕರೆ ಭೂಮಿಯನ್ನು ನೀಡಿದ್ದು, 270 ಕೋಟಿ ವೆಚ್ಚದಲ್ಲಿ ಆಕರ್ಷಕ ಕಟ್ಟಡ ನಿರ್ಮಾಣಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಐತಿಹಾಸಿಕ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದ ರಾಷ್ಟ್ರಪತಿಯವರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಎಲ್ಲ ಹಂತದಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು. ರಾಷ್ಟ್ರಪತಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ವಿಶೇಷ ಅಂದರೆ ಐಐಐಟಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವಿಸಲಾಯಿತು.












Click it and Unblock the Notifications