ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕವಿವಿ ಪ್ರಾಧ್ಯಾಪಕ ಅಮಾನತು
ಧಾರವಾಡ, ಆಗಸ್ಟ್ 09: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ದಿನೇಶ್ ನಾರಾಯಣಕರ ಅವರನ್ನು ಅಮಾನತುಗೊಳಿಸಲಾಗಿದೆ.
'ಲೈಂಗಿಕ ಶೋಷಣೆ ತಡೆ ಸಮಿತಿ'ಸಭೆಯು ವಿವಿಗೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕವಿವಿ ಸಿಂಡಿಕೇಟ್ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕುಲಪತಿ ಪ್ರೊ ಪ್ರಮೋದ್ ಗಾಯಿ ಅವರು ಅಪರಾಧಶಾಸ್ತ್ರ ಹಾಗೂ ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ದಿನೇಶ್ ನಾರಾಯಕರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು.
ಹಾಗೂ ಪ್ರಕರಣದ ವಿಚಾರಣೆಗಾಗಿ ನ್ಯಾಯಾಧೀಶರ ಸಮಿತಿ ರಚಿಸಲಾಗಿದೆ ಎಂದೂ ಪ್ರೊ ಗಾಯಿ ತಿಳಿಸಿದ್ದಾರೆ. ದಿನೇಶ್ ನಾರಾಯಣಕರ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿ 2016ರ ಡಿಸೆಂಬರ್ 19ರಂದು ಕುಲಪತಿ ಪ್ರೊ ಗಾಯಿ ಅವರಿಗೆ ಲಿಖಿತ ದೂರು ನೀಡಿದ್ದರು.
ದೂರಿನನ್ವಯ ಕುಲಪತಿ ಗಾಯಿ ಅವರು ಆಗಷ್ಟ ೭ರಂದು ಪ್ರಕರಣವನ್ನು ವಿವಿಯ ಲೈಂಗಿಕ ಶೋಷಣೆ ತಡೆ ಸಮಿತಿಗೆ ಒಪ್ಪಿಸಿದ್ದರು.
ವಿವಿ ಸಿಂಡಿಕೇಟ್ ಸದಸ್ಯೆ ದೇವಕಿ ಯೋಗಾನಂದ ಅವರ ನೇತೃತ್ವದ ಲೈಂಗಿಕ ಶೋಷಣೆ ತಡೆ ಸಮಿತಿಯು ಜುಲೈ 8ರಂದು 5 ಘಂಟೆಗಳ ಕಾಲ ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ದಿನೇಶ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು.
ನಂತರ ದಿನೇಶ ಅವರನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ಪ್ರಕರಣದ ಮುಂದಿನ ವಿಚಾರಣೆಗಾಗಿ ಸಮಿತಿ ರಚಿಸಿ ತ್ವರಿತ ವಿಚಾರಣೆ ಸಡೆಸಬೇಕು ಎಂದು ಶಿಫಾರಸ್ಸು ಮಾಡಿದ್ದರು.