ಹಿಜಾಬ್ ವಿವಾದ: ಕೋರ್ಟ್ ನೀಡುವ ತೀರ್ಪನ್ನು ಸ್ವಾಗತಿಸೋಣ; ಗೋವಿಂದ ಕಾರಜೋಳ
ಧಾರವಾಡ, ಫೆಬ್ರವರಿ 12: ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಅಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳ ನಡುವೆ ಶುರುವಾದ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಗೋವಿಂದ ಕಾರಜೋಳ, "ಹಿಜಾಬ್ ವಿವಾದವು ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿದ್ದು, ಈಗ ಎಲ್ಲರೂ ಕೂಡಾ ಕೋರ್ಟ್ ಏನೂ ತೀರ್ಪು ನೀಡುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಹಾಗಾಗಿ ಈ ವಿವಾದದಲ್ಲಿ ನ್ಯಾಯಾಲಯ ನೀಡುವ ತೀರ್ಪು ತುಂಬಾ ಮುಖ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ನ್ಯಾಯಾಧೀಶರು ನೀಡುವ ತೀರ್ಪನ್ನು ಎಲ್ಲರೂ ಸ್ವಾಗತಿಸಿ, ಸುಂದರ ಸಮಾಜ ನಿರ್ಮಾಣ ಮಾಡೋಣ," ಎಂದು ಕರೆ ನೀಡಿದ್ದಾರೆ.
ಧಾರವಾಡದ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಹಿಜಾಬ್ ವಿವಾದ ಕುರಿತಂತೆ ಈಗಾಗಲೇ ನ್ಯಾಯಾಲಯವು ಮಧ್ಯಂತರ ಆದೇಶವನ್ನು ನೀಡಿದೆ. ಪ್ರಸ್ತುತ ಇರುವ ಸ್ಥಿತಿಯನ್ನು ಎಲ್ಲರೂ ಕಾಪಾಡಬೇಕು ಎಂದು ತಿಳಿಸಿದೆ. ಮುಂದೆ ಅಂತಿಮವಾಗಿ ನ್ಯಾಯಾಧೀಶರು ಯಾವ ತೀರ್ಪನ್ನು ನೀಡುತ್ತಾರೆ ಎಂಬುವುದು ಕಾದು ನೋಡೋಣ. ತೀರ್ಪು ಏನೇ ಬಂದರು ಕೂಡಾ ಎಲ್ಲರೂ ಅದನ್ನು ಒಪ್ಪಿಕೊಂಡು ಮುಂದು ನಡೆಯೋಣ," ಎಂದರು.

ಸಂಪುಟ ವಿಸ್ತರಣೆ ಸಿಎಂ ಹಾಗೂ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತಾರೆ
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಕಾರಜೋಳ, ಸಂಪುಟ ವಿಸ್ತರಣೆಯನ್ನು ನೋಡಿಕೊಳ್ಳಲು ನಮ್ಮ ಮುಖ್ಯಮಂತ್ರಿಗಳು ಇದ್ದಾರೆ, ಪಕ್ಷದ ಹೈಕಮಾಂಡ್ ಇದೆ, ಅದನ್ನು ನೋಡಿಕೊಳ್ಳುತ್ತಾರೆ. ಇದರಲ್ಲಿ ವೈಯಕ್ತಿಕ ಅಭಿಪ್ರಾಯ ಹೊರಗಡೆ ಹಂಚಿಕೊಳ್ಳಲು ಬರುವುದಿಲ್ಲ. ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ವೈಯಕ್ತಿಕ ಅಭಿಪ್ರಾಯ ಕೇಳಿದಾಗ ತಿಳಿಸುತ್ತೇವೆ. ರಮೇಶ ಜಾರಕಿಹೊಳಿಯವರಿಗೆ ಸಚಿವ ಸ್ಥಾನ ನೀಡಬೇಕೋ, ಬೇಡವೋ ಅನ್ನುವುದರ ಕುರಿತು ಪಕ್ಷದ ನಮ್ಮ ಹಿರಿಯ ನಾಯಕರು ಚರ್ಚೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರರ ಬಿಲ್ಬಾಕಿ ಇರುವುದು ನಿಜ
ನೀರಾವರಿ ಇಲಾಖೆಯಲ್ಲಿ ಗುತ್ತಿಗಾರರ ಬಿಲ್ ಬಾಕಿ ಉಳಿದುಕೊಂಡಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೊರೊನಾ ಮಾಹಾಮಾರಿ ವೈರಸ್ನಿಂದಾಗಿ ಹಣ ಬಿಡುಗಡೆ ತಡವಾಗಿತ್ತು. ಆದರೂ ಕೂಡಾ ಈಗ ಒಂದು ಕೋಟಿ ಒಳಗಡೆ ಇರುವ ಗುತ್ತಿಗೆದಾರರ ಬಿಲ್ ಬಾಕಿಯನ್ನು ಕ್ಲೀಯರ್ ಮಾಡಲಾಗುತ್ತಿದೆ. ಒಂದು ಕೋಟಿಗಿಂತ ಹೆಚ್ಚು ಬಿಲ್ ಇರುವ ಗುತ್ತಿಗೆದಾರರು ಇನ್ನೂ ಸ್ವಲ್ಪ ದಿನ ಕಾಯಬೇಕು. ಇದರ ಕುರಿತು ಅವರಿಗೂ ಕೂಡಾ ಈಗಾಗಲೇ ತಿಳಿಸಲಾಗಿದೆ. ಸಣ್ಣ ಗುತ್ತಿಗೆದಾರರ ಬಿಲ್ ಬಾಕಿ ಉಳಿಯದಂತೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ನಾಲ್ಕು ನಿಗಮಗಳಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು.












Click it and Unblock the Notifications