ದುರಂಹಕಾರಿ ಸಂತೋಷ್ ಲಾಡ್ ಉಚ್ಚಾಟಿಸಿ : ಆಮ್ ಆದ್ಮಿ ಆಗ್ರಹ
ಧಾರವಾಡ, ಏಪ್ರಿಲ್ 24: ಕಲಘಟಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ದುರಂಹಕಾರ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಬಾರಿ ಚುನಾವಣೆ ಗೆದ್ದ ನಂತರ ತನ್ನ ಕ್ಷೇತ್ರವನ್ನು ಮರೆತೇ ಬಿಟ್ಟಿದ್ದ ಕಲಘಟಗಿಯ ಶಾಸಕ ಸಂತೋಷ್ ಲಾಡ್ ರನ್ನು ಅವರದ್ದೇ ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಾಗ ದುರಂಹಕಾರದಿಂದ ಉತ್ತರಿಸಿರುವ ಸಂತೋಷ್ ಲಾಡ್ 'ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರುವುದಿಲ್ಲ, ಏನೀಗ?' ಎಂದು ಕೇಳಿದ್ದಾರೆ.
ಇದು ಸಂತೋಷ್ ಲಾಡ್ಗೆ ಇರುವ ದುಡ್ಡಿನ ಮದ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಇರುವ ಅವರಿಗೆ ಇರುವ ಅಸಡ್ಡೆಯನ್ನು ತೋರಿಸುತ್ತದೆ, ಇಂತಹ ದುರಂಹಕಾರಿ, ಪ್ರಜಾಪ್ರಭುತ್ವ ವಿರೋಧಿ ಶಾಸಕನಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷ ನಾಚಿಕೆಪಟ್ಟುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಂಡು ನಂತರ ನಾಪತ್ತೆಯಾಗುವ ಜನಪ್ರತಿನಿಧಿಗಳ ಈ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು.

ಇಂತಹ ದುಡ್ಡಿನ ಮದವುಳ್ಳ, ದುರಂಹಕಾರಿ, ಗಣಿ ಅಕ್ರಮದ ಅರೋಪ ಹೊತ್ತಿರುವ ಅಯೋಗ್ಯರಿಗೆ ಟಿಕೇಟ್ ನೀಡುವ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಯಾವ ಸಂದೇಶ ನೀಡಲು ಹೊರಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಮಾತ್ರವಲ್ಲ ಈ ಕೂಡಲೇ ಪಕ್ಷದಿಂದ ಸಂತೋಷ್ ಲಾಡ್ರನ್ನು ಉಚ್ಛಾಟಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.
ಸಂತೋಷ್ ಲಾಡ್ಗೆ ತಿಳಿಯದ ವಿಷಯವೆಂದರೆ ಒಬ್ಬ ಶಾಸಕನನ್ನು ಜನರು ಆಯ್ಕೆ ಮಾಡುವುದು ಕ್ಷೇತ್ರದಲ್ಲಿದ್ದು ಜನರ ಸಮಸ್ಯೆ ಆಲಿಸಿ ಪರಿಹಾರ ಮಾಡಲಿ ಎಂದೇ ಹೊರತು ವಿದೇಶದಲ್ಲೋ, ಬೆಂಗಳೂರಿನಲ್ಲೋ ಕುಳಿತು ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುತ್ತಾ, ಮಜಾ ಮಾಡಲಿ ಎಂದಲ್ಲ.
ತನ್ನ ಬಳಿ ದುಡ್ಡಿದೆ, ತಾನು ಯಾರನ್ನಾದರೂ ಕೊಂಡುಕೊಳ್ಳಬಲ್ಲೆ ಎಂಬ ಮದದಲ್ಲಿ ಮೆರೆಯುತ್ತಿರುವ ಸಂತೋಷ್ ಲಾಡ್ರನ್ನು ಸಾರಾಸಗಟಾಗಿ ತಿರಸ್ಕರಿಸಿ, ತಕ್ಕ ಪಾಠ ಕಲಿಸಿ ಬುದ್ದಿ ಕಲಿಸಬೇಕೆಂದು ಆಮ್ ಆದ್ಮಿ ಪಕ್ಷ ಕಲಘಟಗಿಯ ಮತದಾರರಲ್ಲಿ ವಿನಂತಿಸಿಕೊಳ್ಳುತ್ತದೆ.
ಕೆಲವು ದಿನಗಳ ಹಿಂದಷ್ಟೇ ಧರ್ಮ-ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕಲು ಯತ್ನಿಸಿ, ಸಾರ್ವಜನಿಕ ಸಭೆಯಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿ ಸಾಮಾಜಿಕ ಸಾಮರಸ್ಯ ಕದಡಲು ಯತ್ನಿಸಿದ್ದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ರ ಉಮೇದುವಾರಿಕೆಯನ್ನು ರದ್ದುಪಡಿಸುವಂತೆ ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಎರಡೂ ಪಕ್ಷಗಳೂ ಕೇವಲ ದುಡ್ಡಿನ ಕುಳಗಳಿಗೆ, ಕೋಮು ಸಾಮರಸ್ಯ ಹಾಳು ಮಾಡುವವರಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವವರಿಗೆ ಟಿಕೇಟ್ ನೀಡುವ ಮೂಲಕ ಪ್ರಜಾಪ್ರಭುತ್ವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿವೆ. ಮತದಾರರು ಇಂತಹ ಎಲ್ಲಾ ಅಭ್ಯರ್ಥಿಗಳನ್ನು ಪಕ್ಷಗಳನ್ನು ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಆಮ್ ಆದ್ಮಿ ಪಕ್ಷ ವಿನಂತಿಸಿಕೊಳ್ಳುತ್ತದೆ.












Click it and Unblock the Notifications