ತೀವ್ರಗೊಂಡ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್
ಹುಬ್ಬಳ್ಳಿ,ಮಾರ್ಚ್,15:ಕಳಸಾ ಬಂಡೂರಿ ನೀರಿಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡು ರೈಲು ತಡೆಗೆ ಮುಂದಾದ ರೈತರ ಮೇಲೆ ಅಂತಿಮವಾಗಿ ಮಂಗಳವಾರ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಲಾಠಿ ಚಾರ್ಜ್ ನಂತರ ರೈತರು ಚದುರಿದ ಪರಿಣಾಮ ರೈಲ್ವೆ ಸಂಚಾರವನ್ನು ಪುನರ್ ಆರಂಭಿಸಲಾಯಿತು.
ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ ಕಳಸಾ ಬಂಡೂರಿ ಸಮನ್ವಯ ಸಮಿತಿಯ 150 ಜನರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಈ ಯೋಜನೆ ಜಾರಿಗೆ ಒತ್ತಾಯಿಸಿ ಮಾರ್ಚ್ 26ರಂದು ಕರ್ನಾಟಕದಾದ್ಯಂತ ರೈಲುಗಳ ಸಂಚಾರ ಸ್ಥಗಿತಗೊಳಿಸಲು ಸಮಿತಿಯು ನಿರ್ಧರಿಸಿದೆ.
ಮನಸೂರು ರೇವಣಸಿದ್ದೇಶ್ವರ ಮಠದ ಬಸವರಾಜದೇವರ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಕಳಸಾ ಬಂಡೂರಿ ಸಮನ್ವಯ ಸಮಿತಿ ಕಾರ್ಯಕರ್ತರು ಕಳಸಾ ಬಂಡೂರಿ ಯೋಜನೆಯನ್ನು ಅತೀ ಶೀಘ್ರವೇ ಜಾರಿಗೊಳಿಸುವಂತೆ ಪಟ್ಟು ಹಿಡಿದಿದೆ. ಅಲ್ಲದೇ ಬಂಧಿತರನ್ನು ಬಿಡುಗಡೆಗೊಳಿಸುವವರೆಗೂ ರೈಲು ತಡೆ ನಡೆಸಲಿದ್ದೇವೆ ಎಂದು ಹೇಳಿದ್ದರು.
ರೈಲಿಲ್ಲದೆ ಜನರ ಪರದಾಟ
ಹುಬ್ಬಳ್ಳಿಯಲ್ಲಿ ರೈಲು, ಬಸ್ಸು ಸಂಚಾರವಿಲ್ಲದೇ ಜನರು ಪರದಾಡುತ್ತಿದ್ದು, ರೈಲಿಗಾಗಿ ಜನರು ಕಾಯುತ್ತಾ ಕುಳಿತಿರುವುದು. ಕಳಸಾ ಬಂಡೂರಿ ಸಮನ್ವಯ ಸಮಿತಿಯು ಕಳಸಾ ಬಂಡೂರಿ ಯೋಜನೆ ಆಗ್ರಹಿಸಿ ಇಂದು ರೈಲು ತಡೆ ನಡೆಸಿದ್ದಾರೆ.
ಎಷ್ಟು ಗಂಟೆಯಿಂದ ಆರಂಭವಾಗಿದೆ ಈ ಪ್ರತಿಭಟನೆ?
ಕಳಸಾ ಬಂಡೂರಿ ಪ್ರತಿಭಟನೆಯು ಮಧ್ಯಾಹ್ನ 1 ಗಂಟೆಗೆ ಆರಂಭವಾಗಿದ್ದು, ರೈತರು ಕಳಸಾ ಬಂಡೂರಿ ಯೋಜನೆ ಜಾರಿಯಾಗದ ಹಿನ್ನಲೆಯಲ್ಲಿ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾರೆ
ಈ ಹೋರಾಟಕ್ಕೆ ಈಗ ಬಂದ ಆದೇಶವೇನು?
ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸುತ್ತಿರುವ ರೈತರ ಮೇಲೆ ಲಾಠಿ ಪ್ರಹಾರ ಮಾಡುವಂತಿಲ್ಲ ಎಂದು ಆದೇಶ ಹೊರಬಿದ್ದಿದೆ.
ಪ್ರಯಾಣಿಕರ ಪರಿಸ್ಥಿತಿ ಏನಾಗಿದೆ?
ಪರ ಊರಿಗೆ ಹೋಗಲು ಬಂದ ಪ್ರಯಾಣಿಕರು ರೈಲು ನಿಲ್ದಾಣದಲ್ಲಿಯೇ ಉಳಿಯವಂತಾಗಿದೆ. ಅಲ್ಲದೇ ಪ್ರಯಾಣಿಕರಿಂದ ಟಿಕೆಟ್ ಪಡೆದು ಅವರ ಹಣವನ್ನು ವಾಪಾಸು ನೀಡಲಾಗುತ್ತಿದೆ.
ಬಸ್ಸುಗಳೂ ಇಲ್ಲ
ತಾರಕ್ಕಕ್ಕೆರಿದ ರೈತರ ಪ್ರತಿಭಟನೆಯಿಂದಾಗಿ ರೈಲಿನ ಜೊತೆಯಲ್ಲಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಸ್ಸುಗಳಿಲ್ಲದೆ ಶಾಲಾ, ಕಾಲೇಜು ಮಕ್ಕಳು, ಜನಸಾಮಾನ್ಯರು ನಡೆದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿತ್ತು.
ಗಾಂಧೀಜಿ, ವಿವೇಕಾನಂದ ವೇಷದಲ್ಲಿ ರೈತರು
ಲಾಠಿ ಪ್ರಹಾರ ನಡೆಸಲು ಬಂದ ಬಂದ ಪೊಲೀಸರಿಗೆ ರೈತರು ಹೊಡೆಯುವುದಾದರೆ ವಿವೇಕಾನಂದ ಹಾಗೂ ಗಾಂಧೀಜಿಗೆ ಹೊಡೆಯಿರಿ. ಇಲ್ಲವಾದರೆ ಕಳಸಾ ಬಂಡೂರಿ ಯೋಜನೆ ಅನುಷ್ಠನಾಗೊಳಿಸಿರಿ ಎಂದರು.
ಪ್ರತಿಭಟನೆಯಲ್ಲಿ ಹೆಂಗಸರು ಭಾಗಿ
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಆರು ಗಂಟೆಗೂ ಹೆಚ್ಚು ಗಂಟೆಗಳ ಕಾಲ ಇದೇ ಮೊದಲ ಬಾರಿ ಪ್ರತಿಭಟನೆ ನಡೆದಿದ್ದು, ಹೆಂಗಸರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಮಧ್ಯಾಹ್ನದಿಂದ ರೈತರಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಚೌಳಿ ಹಾಗೂ ಜೆಡಿಎಸ್ ಪಕ್ಷದ ನಾಯಕ ಎನ್ ಎಸ್ ಕೋನ್ ರೆಡ್ಡಿ ಭೇಟಿ ನೀಡಿ ತೆರಳಿದರು
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಏಪ್ರಿಲ್ ಒಂದರಂದು ರೈತರು ಸಭೆ ಸೇರಲಿ ನಿರ್ಧರಿಸಿದ್ದು, ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಯಾವ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು?
ಹುಬ್ಬಳ್ಳಿ- ವಿಜಯವಾಡ ಅಮರಾವತಿ ಎಕ್ಸ್ಪ್ರೆಸ್ ಹಾಗೂ ಹುಬ್ಬಳ್ಳಿ-ಸೋಲಾಪುರ ಪ್ಯಾಸೆಂಜರ್ ಮತ್ತು ಸಿಕಂದ್ರಾಬಾದ್-ಹುಬ್ಬಳ್ಳಿ, ಧಾರವಾಡ- ಹರಿಪ್ರೀಯ ಎಕ್ಸ್ಪ್ರೆಸ್ ರೈಲುಗಳನ್ನು ತಡೆಹಿಡಿಯಲಾಗಿತ್ತು.