ಹುಬ್ಬಳ್ಳಿಯಲ್ಲಿ ಡಾ. ಎಂ.ಎಂ.ಜೋಶಿಗೆ ಆತ್ಮೀಯ ಸನ್ಮಾನ
ಹುಬ್ಬಳ್ಳಿ, ಫೆಬ್ರವರಿ 07 : 'ಪ್ರಶಸ್ತಿ ಮತ್ತು ಸನ್ಮಾನಗಳು ನನಗಲ್ಲ. ನನ್ನ ಬಳಿ ಚಿಕಿತ್ಸೆ ಪಡೆದು ಜೀವನದಲ್ಲಿ ಹೊಸ ಬೆಳಕು ಕಂಡುಕೊಂಡ ರೋಗಿಗಳಿಗೆ ಸಲ್ಲುತ್ತದೆ' ಎಂದು ಖ್ಯಾತ ನೇತ್ರ ತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಂ.ಜೋಶಿ ಹೇಳಿದರು.
ಹುಬ್ಬಳ್ಳಿಯ ಐಎಂಎ ಸಭಾಂಗಣದಲ್ಲಿ ಕೆಲವು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಂ.ಜೋಶಿ ಮತ್ತು ಖ್ಯಾತ ಸಂಗೀತಗಾರ ಎಂ.ವೆಂಕಟೇಶಕುಮಾರ ಅವರನ್ನು ಸನ್ಮಾನಿಸಲಾಯಿತು. [ಈ ಬಾರಿಯ ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ]

ಖ್ಯಾತ ಸಂಗೀತಗಾರ ಎಂ.ವೆಂಕಟೇಶಕುಮಾರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 'ಅತ್ಯಂತ ಬಡತನದಲ್ಲಿ ನನ್ನ ಬಾಲ್ಯವನ್ನು ಕಳೆದಿದ್ದೇನೆ. ನಾನು ಕಲಿತಿದ್ದು 5ನೇ ತರಗತಿ ಮಾತ್ರ. ನನಗೆ ಇಂಗ್ಲಿಷ್ ಭಾಷೆ ಗೊತ್ತಿಲ್ಲದಿದ್ದರೂ, ಸಂಗೀತ ಎಂಬ ಭಾಷೆಯನ್ನು ತಿಳಿಯಲು ಪ್ರಯತ್ನಿಸಿದ್ದೇನೆ' ಎಂದು ತಿಳಿಸಿದರು. [ರಾಜಮೌಳಿಗೆ ಪದ್ಮಶ್ರೀ, ಸಿದ್ದರಾಮಯ್ಯಗೆ ಬಹಿರಂಗ ಪತ್ರ]
'ನನ್ನಲ್ಲಿ ವಂಶಪಾರಂಪರ್ಯತೆಯಿಂದ ಸಂಗೀತ ಹರಿದು ಬಂದಿದೆ. ನನ್ನ ತಂದೆಯವರು ಜಾನಪದ ಕಲಾವಿದರಾಗಿದ್ದರು, ಅತ್ಯಂತ ಸುಮಧುರ ಕಂಠ ಅವರದಾಗಿತ್ತು. ನಾನು ಎಳೆಯ ವಯಸ್ಸಿನಲ್ಲಿಯೇ ಸಂಗೀತ ಕಲಿಯುತ್ತಿದ್ದಾಗ ನನಗೆ ತಿಳಿ ಹೇಳಿ ಮಾರ್ಗದರ್ಶನ ಮಾಡುತ್ತಿದ್ದರು' ಎಂದು ನೆನೆಪಿನ ಬುತ್ತಿ ತೆರೆದಿಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಎ ಅಧ್ಯಕ್ಷ, ಖ್ಯಾತ ಮನೋವೈದ್ಯ ಡಾ. ವಿನೋದ ಕುಲಕರ್ಣಿ ಅವರು ಮಾತನಾಡಿ, ಡಾ. ಜೋಶಿ ಹಾಗೂ ವೆಂಕಟೇಶಕುಮಾರ ಅವರ ಸಾಧನೆಗಳ ಬಗ್ಗೆ ಮತ್ತು ಅವರು ನಡೆದುಬಂದ ದಾರಿಯ ಬಗ್ಗೆ ವಿವರಣೆ ನೀಡಿದರು.
ಡಾ.ಕೆ.ಎಚ್.ಚಿತೂರಿ, ಡಾ.ಆರ್.ಎನ್.ಜೋಶಿ, ಡಾ.ಕಂಚಿ, ಡಾ.ಬಳಿಗಾರ, ಡಾ.ಜಯಲಕ್ಷ್ಮೀ ಕಾಮತ್, ಡಾ. ಕಲಘಟಗಿ, ಡಾ. ಸಂದೀಪ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಮ್ಯಾನೇಜರ್ ಅಗ್ರವಾಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications