ರಮೇಶ್ ಕುಮಾರ್ ವಿರುದ್ಧ ದಾಖಲೆಗಳಿವೆ : ಹಿರೇಮಠ್

ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಬಗ್ಗೆ ಧಾರವಾಡದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಹಿರೇಮಠ್, ನನಗೂ ಶಾಸಕಾಂಗದ ಬಗ್ಗೆ ಅಪಾರ ಗೌರವವಿದೆ. ಭೂಮಿ ಕಬಳಿಸಿದ ಬಗ್ಗೆ ನಾನು ಪ್ರಸ್ತಾಪಿಸಿದ್ದೇನೆ. ಇದು ಹಕ್ಕುಚ್ಯುತಿ ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು ಮತ್ತು ರಮೇಶ್ ಕುಮಾರ್ ಅವರೇ ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. (ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ಮಂಡನೆ)
ಸೋಮವಾರ ವಿಧಾನ ಸಭೆ ಕಲಾಪದಲ್ಲಿ ಎಸ್.ಆರ್.ಹಿರೇಮಠ್ ಮಾಧ್ಯಮಗಳಿಗೆ ಅನವಶ್ಯಕವಾಗಿ ಹೇಳಿಕೆ ನೀಡುತ್ತ, ತಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ದಾಖಲೆಗಳಿಲ್ಲದೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದರು. ಅದನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಿದ್ದಾರೆ. (ಹಿರೇಮಠ್ ವಿರುದ್ಧ ಕಾಂಗ್ರೆಸ್ ಶಾಸಕರ ಕೆಂಗಣ್ಣು)
ಇದಕ್ಕೆ ತಿರುಗೇಟು ನೀಡಿರುವ ಹಿರೇಮಠ್ ರಮೇಶ್ ಕುಮಾರ್ ಅವರ ಭೂ ಹಗರಣಗಳ ಕುರಿತು ನಾನು ಪ್ರಸ್ತಾಪಿಸಿದ್ದೇನೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಯಬೇಕು. ರಮೇಶ್ ಕುಮಾರ್ ಅವರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೆ ದಾಖಲೆಗಳಿವೆ ಎಂದು ಹೇಳಿದ್ದಾರೆ.
ಅಕ್ರಮ ಗಣಿಗಾಕೆ ಪ್ರಕರಣದಿಂದಾಗಿ ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ರಾಜೀನಾಮೆ ನೀಡಿದ ದಿನದಿಂದ ಕಾಂಗ್ರೆಸ್ ಶಾಸಕರು ಕಣ್ಣು ಹಿರೇಮಠ್ ಅವರ ಮೇಲೆ ಬಿದ್ದಿದೆ. ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಹಿರೇಮಠ್ ಹೇಳಿಕೆ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ರಮೇಶ್ ಕುಮಾರ್, ಕಳೆದ ವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಹಿರೇಮಠ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. (ಲಾಡ್ ರಾಜೀನಾಮೆ, ಕಾಂಗ್ರೆಸ್ ಮೊದಲ ವಿಕೆಟ್ ಪತನ)












Click it and Unblock the Notifications