ಧಾರವಾಡ : ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಶಿಕ್ಷಣದ ಭಾಗ್ಯ
ಧಾರವಾಡ, ಜುಲೈ 31 : ಧಾರವಾಡದಲ್ಲಿ ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಶಿಕ್ಷಣದ ಭಾಗ್ಯ ಸಿಕ್ಕಿದೆ. ವ್ಯಾಪಾರಿಗಳ ಮನವೊಲಿಸಿ ಸರಸಗಂಗಾ ಪ್ರಾಥಮಿಕ ಶಾಲೆಗೆ 11 ಮಕ್ಕಳನ್ನು ದಾಖಲು ಮಾಡಲಾಗಿದೆ. ಮಕ್ಕಳು ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದಾರೆ.
ಧಾರವಾಡ ನಗರದ ವಿದ್ಯಾಗಿರಿ ಬಳಿ ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಬ್ಯಾಟು , ಗೊಂಬೆ, ಸ್ವೆಟರ್, ಗೃಹಾಲಂಕಾರ ವಸ್ತುಗಳನ್ನು ಮಾರುವ ಕುಟುಂಬವಿದೆ. ಹರ್ಯಾಣದಿಂದ ವಲಸೆ ಬಂದ ಕುಟುಂಬದೊಂದಿಗೆ 11 ಮಕ್ಕಳಿದ್ದಾರೆ.
ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. ಶಿಕ್ಷಣ ಇಲಾಖೆ ಅಧಿಕಾರಿಗಳ ಈ ಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಲಕರ ಮನವೊಲಿಸಿ 11 ಮಕ್ಕಳನ್ನು ಸಮೀಪದ ಸರಸಗಂಗಾ ಪ್ರಾಥಮಿಕ ಶಾಲೆಗೆ ದಾಖಲು ಮಾಡಲಾಗಿದೆ. ಮಕ್ಕಳು ಪ್ರತಿನಿತ್ಯ ಶಾಲೆಗೆ ಹಾಜರಾಗುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.
ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ, ಹಾಲು, ಪಠ್ಯಪುಸ್ತಕ, ಸಮವಸ್ತ್ರ ಮತ್ತಿತರ ಸೌಲಭ್ಯ ದೊರೆಯುವ ಬಗ್ಗೆ ತಿಳುವಳಿಕೆ ನೀಡಿದರು.
ಪಾಲಕರ ಕೋರಿಕೆಯಂತೆ ಮಕ್ಕಳಿಗೆ ಹಿಂದಿ ಹಾಗೂ ಮರಾಠಿ ಬೋಧನೆಗೆ ಏರ್ಪಾಡು ಮಾಡಲು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು, ಅಲೆಮಾರಿ ಹಾಗೂ ಸಂಚಾರಿ ಕಾರ್ಮಿಕರ ಮಕ್ಕಳು ಕಂಡು ಬಂದರೆ ಸಾರ್ವಜನಿಕರು ಕೂಡಲೇ ಶಿಕ್ಷಣ ಇಲಾಖೆಗೆ ಅಥವಾ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ. ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.












Click it and Unblock the Notifications