ವೃದ್ಧ ತಂದೆಯ ಹೆಣವನ್ನಾದರೂ ತೆಗೆದುಕೊಳ್ಳಲು ಧಾರವಾಡಕ್ಕೆ ಮಗ ಬರ್ತಾನಾ?
Recommended Video
ಧಾರವಾಡ, ಅಕ್ಟೋಬರ್ 29: ಎರಡು ದಿನಗಳ ಹಿಂದಷ್ಟೇ ಧೂರ್ತ ಮಗನೊಬ್ಬ ವೃದ್ಧ ತಂದೆಯನ್ನು ರಾಷ್ಡ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವೃದ್ಧ ವಿನ್ಸೆಟ್ ಕ್ರಿಸ್ಟಿನ್ ಸೋಮವಾರ ಸಾವಿಗೀಡಾಗಿದ್ದಾರೆ.
ವಯಸ್ಸಾದ ತಂದೆಯನ್ನು ಸ್ವತಃ ಮಗನೇ ಬೆಂಗಳೂರಿನ ಮತ್ತಿಕೆರೆಯಿಂದ ಧಾರವಾಡದ ಹೊರವಲಯದ ಗರಗದಲ್ಲಿ ರಸ್ತೆ ಮಧ್ಯೆ ಬಿಟ್ಟು ಹೋದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರ ನೆರವಿನೊಂದಿಗೆ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿನ್ಸೆಟ್ನ್ನು ತಪಾಸಣೆ ಮಾಡದ ನಂತರ ಆತ ಮರೆವಿನ ಕಾಯಿಲೆಯಿಂದ ನರಳುತ್ತಿರುವುದು ಗೊತ್ತಾಗಿದೆ.
ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ
ಧಾರವಾಡದ ಹೆದ್ದಾರಿಯಲ್ಲಿ ಕಾರಿನಿಂದ ತಂದೆಯನ್ನು ಕೆಳಗಿಳಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದನು, ವಿನ್ಸೆಟ್ಗೆ ಮರೆವಿನ ಕಾಯಿಲೆ ಇದ್ದರೂ ಕೂಡ ಕೆಲವು ಸಾಮಾನ್ಯ ಸಂಗತಿಗಳು ನೆನಪಿತ್ತು, ಆತನ ಹೆಸರು, ಊರು, ಧರ್ಮ ಇವೆಲ್ಲವೂ ಆತನಿಗೆ ನೆನಪಿತ್ತು.
ವಿನ್ಸೆಟ್ ಅವರನ್ನು ಆಸ್ಪತ್ರೆಯ ಬಳಿ ಇರುವ ಅನಾಥಾಶ್ರಮಕ್ಕೆ ಕಳುಹಿಸಲಾಗಿತ್ತು, ಆದರೆ ಅವರು ತಮ್ಮ ಮನೆಗೆ ಹಿಂದಿರುಗಲು ಚಡಪಡಿಸುತ್ತಿದ್ದರು, ಅಷ್ಟೇ ಅಲ್ಲದೆ ಹತ್ತಿರದಲ್ಲಿರುವ ಚರ್ಚ್ ನಲ್ಲಿ ತನ್ನನ್ನು ಬಿಡಿ ಅಲ್ಲಿಯೇ ಇರುತ್ತೇನೆ ಅನಾಥಾಶ್ರಮದಲ್ಲಿ ಇರುವುದಿಲ್ಲ ಎಂದು ಹೇಳುತ್ತಿದ್ದರು.
ಮಗನಿಗೆ ಕನಿಷ್ಠ ಪ್ರೀತಿ ಎನ್ನುವುದು ಇದ್ದಿದ್ದರೆ ತಂದೆಯನ್ನು ರಸ್ತೆಯಲ್ಲಿ ಬಿಡುವ ಬದಲಾಗಿ ವೃದ್ಧಾಶ್ರಮ ಸೇರಿಸುತ್ತಿದ್ದರು ಆದರೆ ಆ ಕನಿಷ್ಠ ಕಾಳಜಿಯೂ ಮಗನಿಗೆ ಇಲ್ಲದೆ ಹೋಯಿತು, ತಂದೆ-ತಾಯಿ ತಮ್ಮ ಕಷ್ಟಗಳನ್ನೆಲ್ಲ ಬದಿಗಿಟ್ಟು ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ ಆದರೆ ಇಂತಹ ಮಕ್ಕಳು ಅದೇ ತಂದೆ ತಾಯಿಯನ್ನು ನಾಯಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಾರೆ. ಸಮಾಜದಲ್ಲಿ ಮಾನವೀಯತೆ ಎಲ್ಲಿ ಹೋಗಿದೆ ಎನ್ನುವುದು ನಮ್ಮೆಲ್ಲರ ಪ್ರಶ್ನೆಯಾಗಿದೆ.
ಕೊನೆಗೆ ತನ್ನ ತಂದೆ ಮೃತದೇಹವನ್ನಾದರೂ ತೆಗೆದುಕೊಳ್ಳಲು ಮಗ ಬರುತ್ತಾನಾ ಎಂಬ ಪ್ರಶ್ನೆ ಕಾಡುತ್ತಿದೆ.