ಆರ್ಥಿಕ ಹಿಂಜರಿತದ ಹೊಡೆತಕ್ಕೂ ಜಗ್ಗದೆ ಲಾಭದತ್ತ ನುಗ್ಗಿದೆ ಧಾರವಾಡದ ಈ ಕೈಗಾರಿಕೆ
ಧಾರವಾಡ, ನವೆಂಬರ್ 13: ಇತ್ತೀಚೆಗೆ ದೊಡ್ಡ ದೊಡ್ಡ ಕೈಗಾರಿಕೆಗಳು ಆರ್ಥಿಕ ಹಿಂಜರಿಕೆ ಪರಿಣಾಮವಾಗಿ ಬಾಗಿಲು ಹಾಕುವಂಥ ಸನ್ನಿವೇಶ ನಿರ್ಮಾಣವಾಗಿದೆ. ಈಗಾಗಲೇ ದೇಶದಲ್ಲಿ ನಾನಾ ಕಂಪನಿ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಆರ್ಥಿಕ ಹಿಂಜರಿತಕ್ಕೆ ಧೂಳೀಪಟವಾಗುತ್ತಿವೆ. ಇದಕ್ಕೆ ಕಾರಣ ಏನು, ಮುಂದಿನ ಸ್ಥಿತಿ ಗತಿ ಹೇಗಿರಲಿದೆ ಎಂಬ ಆತಂಕ ಮತ್ತೊಂದೆಡೆ.
ಆದರೆ ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲೂ ಧಾರವಾಡ ಜಿಲ್ಲೆಯ ಕೈಗಾರಿಕೆ ಮಾತ್ರ ಲಾಭದತ್ತ ಮುನ್ನಗ್ಗುತ್ತಿದೆ.

ಧಾರವಾಡದ ಎನ್ ಜಿಇಎಫ್ ಕೈಗಾರಿಕಾ ಸಂಸ್ಥೆ
ಎನ್ ಜಿಇಎಫ್ ಕೈಗಾರಿಕೆ ಮೂಲತಃ ಬೆಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಕೇಂದ್ರ ಸರ್ಕಾರವು ಈ ಕೈಗಾರಿಕೆಯನ್ನು ಬಂದ್ ಮಾಡಲು ನಿರ್ಧರಿಸಿದ್ದರಿಂದ 1984ರಲ್ಲಿ ಹುಬ್ಬಳ್ಳಿಯ ರಾಯಪುರದಲ್ಲಿ ಮರುಸ್ಥಾಪನೆ ಮಾಡಲು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿದ್ದ ಸಂಸ್ಥೆಯ ಯಂತ್ರೋಪಕರಣಗಳನ್ನು ಇಲ್ಲಿಗೆ ತಂದು ಮರುಸ್ಥಾಪಿಸಲಾಯಿತು. ಆರಂಭದಲ್ಲಿ ಹೆಚ್ಚು ಪ್ರಗತಿ ಕಾಣದ ಈ ಸಂಸ್ಥೆಯು ಇಂದು ಉತ್ತಮ ರೀತಿ ಬೆಳವಣಿಗೆಯಾಗಿ ಸ್ಥಳೀಯರಿಗೆ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿದೆ.

2019ರಲ್ಲಿ ಸುಮಾರು 2.50 ಕೋಟಿ ಲಾಭ
2017-18ರಲ್ಲಿ ಸಂಸ್ಥೆ 31.20 ರೂಪಾಯಿ ಕೋಟಿಗಳ ವಹಿವಾಟನ್ನು ನಡೆಸಿದ್ದು, 38. 96 ರೂ ಲಕ್ಷ ಲಾಭವನ್ನು ಗಳಿಸಿದೆ. ಮತ್ತು 2018-19ರಲ್ಲಿ 132.36 ರೂಪಾಯಿ ಕೋಟಿಗಳ ವಹಿವಾಟನ್ನು ನಡೆಸಿದ್ದು, ರೂ. 178.38 ಲಕ್ಷಗಳ ನಿರ್ವಹಣಾ ಲಾಭ ಮತ್ತು ರೂ. 52.84 ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿದೆ.
ಎನ್ ಜಿಇಎಫ್ ಕೈಗಾರಿಕಾ ಸಂಸ್ಥೆಯ ಪುನಶ್ಚೇತನಕ್ಕೆ 30 ಕೋಟಿ ರೂಪಾಯಿಗಳ ಅನುದಾನದ ಅವಶ್ಯಕತೆಯಿದ್ದು, ಇದನ್ನು ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರ ಅನುದಾನದ ಭರವಸೆ
ಎನ್ ಜಿಇಎಫ್ ಕೈಗಾರಿಕಾ ಸಂಸ್ಥೆಯು ಹೆಸ್ಕಾಂನೊಂದಿಗೆ ಒಪ್ಪಂದ ಮಾಡಿಕೊಂಡು ಟ್ರಾನ್ಸ್ ಫಾರ್ಮರ್ ಗಳ ರಿಪೇರಿ ಹಾಗೂ ಉತ್ಪಾದನೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಆದರೂ ಸಂಸ್ಥೆಯು ಲಭ್ಯವಿರುವ ನುರಿತ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಅತ್ಯುತ್ತಮ ಗುಣಮಟ್ಟದ ಮೋಟಾರು ಹಾಗೂ ಟ್ರಾನ್ಸ್ ಫಾರ್ಮರ್ ಗಳನ್ನು ಪೂರೈಕೆ ಮಾಡಿ, ಅಭಿವೃದ್ಧಿಪಡಿಸುತ್ತಿದೆ.

ಬೆಳಗಾವಿ, ತರೀಕೆರೆಯಲ್ಲಿ ಶಾಖೆ ಆರಂಭ
ಎನ್ ಜಿಇಎಫ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕಿರಣ ಅಡವಿ ಅವರು ಮಾತನಾಡಿ, "ಈ ಸಂಸ್ಥೆಯು ಉತ್ತಮ ಗುಣಮಟ್ಟದ ಉತ್ಪಾದನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೆಸ್ಕಾಂ, ಕೈಗಾ ಅಣುಸ್ಥಾವರ, ಮಿಲಿಟರಿ, ಎಚ್ ಎಂಟಿ ಮತ್ತು ಇಸ್ರೊದಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಗೆ ಮೋಟಾರು, ಸ್ವಿಚ್ ಗೇರ್ ಮತ್ತು ಟ್ರಾನ್ಸ್ ಫಾರ್ಮರ್ ಗಳನ್ನು ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿದೆ. ಬೆಳಗಾವಿ, ತರಿಕೇರಿಗಳಲ್ಲಿ ಎನ್ ಜಿಇಎಫ್ ಸಂಸ್ಥೆಯ ಶಾಖೆಗಳನ್ನು ಆರಂಭಿಸಲಾಗಿದ್ದು, ಸದ್ಯದಲ್ಲಿಯೇ ಕೊಪ್ಪಳದಲ್ಲಿ ಮತ್ತೊಂದು ಶಾಖೆ ಆರಂಭಿಸಲಾಗುತ್ತಿದೆ ಎಂದರು.
ಸಂಸ್ಥೆಯಲ್ಲಿ 250ಕ್ಕೂ ಹೆಚ್ಚು ಸಿಬ್ಬಂದಿಯಿದ್ದು, ಎನ್ ಜಿಇಎಫ್ ಸಂಸ್ಥೆಯು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ. ಸಕಾಲದಲ್ಲಿ ಸರ್ಕಾರವು ಅಗತ್ಯ ಆರ್ಥಿಕ ನೆರವು ನೀಡಿದರೆ ಇನ್ನು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿ ಹೆಚ್ಚಿನ ಉದ್ಯೋಗ, ಲಾಭಾಂಶ ಮತ್ತು ಕೈಗಾರಿಕೆಗಳಿಗೆ ಪೂರಕವಾದ ಉತ್ಪನ್ನಗಳನ್ನು ಪೂರೈಸಬಹುದಾಗಿದೆ.












Click it and Unblock the Notifications