ವಿಮೆ ಹಣ ನೀಡಲು ಕಂಪನಿ ನಿರಾಕರಣೆ: ಬಡ್ಡಿ ಸಮೇತ ನೀಡುವಂತೆ ಗ್ರಾಹಕರ ಆಯೋಗ ಆದೇಶ
ಧಾರವಾಡ, ಮೇ.26: ತಂದೆ ಅಪಘಾತದಲ್ಲಿ ಸತ್ತರೂ ತಾಯಿ ಮಗಳಿಗೆ ವಿಮೆ ಹಣ ನೀಡಿದೇ ಸತಾಯಿಸುತ್ತಿದ್ದ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ವಿಮೆ ಹಣದ ಜೊತೆಗೆ ದಂಡ ವಿಧಿಸಿದೆ.
ಧಾರವಾಡ ಸರಸ್ವತಪುರದ ನಿವಾಸಿಯಾಗಿದ್ದ ಪ್ರಶಾಂತ್ ಎನ್ನುವವರು ತನ್ನ ದ್ವಿಚಕ್ರ ವಾಹನದ ಮೇಲೆ ಪಿ.ಎ. ಕವರೇಜ್ ಸಮೇತ ವಿಮೆ ಮಾಡಿಸಿದ್ದರು. ಯಾವುದೇ ಅಪಘಾತದಿಂದ ವಿಮಾದಾರ ಮೃತನಾದಲ್ಲಿ ಅವನ ಅವಲಂಬಿತರಿಗೆ 15 ಲಕ್ಷ ರೂಪಾಯಿ ಪರಿಹಾರ ಕೊಡಲು ವಿಮಾ ಪಾಲಿಸಿಯಲ್ಲಿ ನಿಯಮ ಇತ್ತು.

ಪ್ರಶಾಂತ್ ವಿಮಾ ಕಂಪನಿಗೆ ರೂ.1489/- ಪ್ರಿಮಿಯಮ್ ಹಣ ಸಂದಾಯ ಮಾಡಿದ್ದರು. ದಿ:11/10/2022 ರಂದು ವಿಮಾದಾರ/ ಮೃತ ಪ್ರಶಾಂತ್ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೃತರಾಗಿದ್ದರು. ಈ ಬಗ್ಗೆ ವಾಹನ ಚಾಲಕನ ಮೇಲೆ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿತ್ತು.
ಆ ಎಲ್ಲ ದಾಖಲೆಗಳ ಸಮೇತ ಮೃತ ಪ್ರಶಾಂತ್ ಹೆಂಡತಿ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿರವರು ತಾವು ಮೃತನ ವಾರಸುದಾರರಿದ್ದು ತಮಗೆ ರೂ.15 ಲಕ್ಷ ವಿಮೆ ಹಣಕೊಡುವಂತೆ ಎದುರುದಾರ ಐಸಿಐಸಿಐ ಲೋಂಬಾರ್ಡ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು. ಮೃತ ಪ್ರಶಾಂತ್ ಅಪಘಾತ ಕಾಲಕ್ಕೆ ಅಧಿಕೃತ ಚಾಲನಾ ಪತ್ರ ಹೊಂದಿರಲಿಲ್ಲ. ವಿಮೆ ಪಾಲಸಿ ಷರತ್ತನ್ನು ಉಲ್ಲಂಘಿಸಿದ್ದಾರೆಂದು ಎದುರುದಾರ ವಿಮೆ ಕಂಪನಿಯವರು ದೂರುದಾರನ ಕ್ಲೇಮನ್ನು ನಿರಾಕರಿಸಿದ್ದರು.
ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ತಮಗೆ ವಿಮೆ ಹಣ ಅಥವಾ ಪರಿಹಾರ ನೀಡಿಲ್ಲ ಎಂದು ವಿಮೆ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.
ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಸದ್ಯದ ಮೋಟಾರ ವಾಹನ ಕಾಯ್ದೆಯ ನಿಯಮದಂತೆ ಅಪಘಾತವಾದ ದಿನ 11/10/2022 ರಂದು ಮೃತ ಪ್ರಶಾಂತ್ ಇವರು ಚಾಲನಾ ಪತ್ರ ಹೊಂದಿರುವುದು ಕಂಡುಬರುತ್ತದೆ. ಹೊಸ ಮೋಟಾರ ವಾಹನ ಕಾಯ್ದೆಯ ನಿಯಮವನ್ನು ಅರ್ಥೈಸುವಲ್ಲಿ ಎದುರುದಾರ ಪ್ರಶಾಂತ್ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಮೃತ ಅಧಿಕೃತ ಚಾಲನಾ ಪತ್ರ ಹೊಂದಿದ್ದರೂ ದೂರುದಾರರ ವಿಮಾ ಕ್ಲೇಮನ್ನು ತಿರಸ್ಕರಿಸಿರುವುದು ವಿಮಾ ನಿಯಮಗಳಿಗೆ ವಿರುದ್ಧವಾಗುತ್ತದೆ ಮತ್ತು ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯ ಉಲ್ಲಂಘನೆಯು ಆಗುತ್ತದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದರಿಂದ ಎದುರುದಾರ ಐಸಿಐಸಿಐ ಲೋಂಬಾರ್ಡ ವಿಮಾ ಕಂಪನಿಯವರು ದೂರುದಾರರಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿರುವುದರಿಂದ ವಿಮೆ ತಿರಸ್ಕರಿಸಿದ ದಿನಾಂಕದಿಂದ ಶೇ8% ರಂತೆ ಬಡ್ಡಿ ಸಮೇತ ರೂ.15 ಲಕ್ಷ ವಿಮೆ ಹಣ ದೂರುದಾರರಿಗೆ ನೀಡುವಂತೆ ಆಯೋಗ ಆದೇಶಿಸಿದೆ.
ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ಅವರಿಗೆ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಐಸಿಐಸಿಐ ಲೋಂಬಾರ್ಡ ಕಂಪನಿಯವರಿಗೆ ಆಯೋಗ ನಿರ್ದೇಸಿದೆ.












Click it and Unblock the Notifications