ಪ್ರಹ್ಲಾದ್ ಜೋಶಿಯನ್ನು ಸಮರ್ಥಿಸಿಕೊಂಡ ಧಾರವಾಡ ಬಿಜೆಪಿ ವಕ್ತಾರ
ಹುಬ್ಬಳ್ಳಿ, ಫೆಬ್ರವರಿ,02: ರಾಜ್ಯದ ದಾವಣಗೆರೆ ಹಾಗೂ ಬೆಳಗಾವಿ ನಗರಗಳು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರ ಪ್ರಯತ್ನದಿಂದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಬಿಜೆಪಿ ಧಾರವಾಡ ಜಿಲ್ಲಾ ವಕ್ತಾರ ವೀರೇಶ ಸಂಗಳದ ಕಾಂಗ್ರೆಸ್ ಗೆ ಮರು ಉತ್ತರ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರವೂ ಸಹ ನಿಶ್ಚಿತವಾಗಿಯೂ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ. ದೊಡ್ಡ ನಗರಗಳಿಗೆ ಹೆಚ್ಚಿನ ಮೂಲಭೂತ ಸೌಲಭ್ಯ ಒದಗಿಸಿ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸುವ ಬೃಹತ್ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ ಎಂದು ಸಮರ್ಥನೆ ನೀಡಿದರು.[20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ]
ಕಾಂಗ್ರೆಸ್ ರಾಜ್ಯದ ಬೆಳವಣಿಗೆ ಹಾಗೂ ಅವಳಿ ನಗರದ ಅಭಿವೃದ್ಧಿಗೆ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದನ್ನು ಪಾಲಿಕೆಯ ವಿಪಕ್ಷ ನಾಯಕರು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಭಿವೃದ್ಧಿಗೆ ಬಿಜೆಪಿ ನಾಯಕರು ಕಟಿಬದ್ಧರಾಗಿದ್ದು ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣ ಮಾಡದೆ ವಾಸ್ತವತೆ ಅರಿತುಕೊಳ್ಳಲಿ ಮತ್ತು ಅಭಿವೃದ್ಧಿಗೆ ಕೈ ಜೋಡಿಸಲಿ ಎಂದು ವೀರೇಶ ಸಂಗಳದ ಹೇಳಿದ್ದಾರೆ.[ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]
ಕಾಂಗ್ರೆಸ್ ಪಕ್ಷವು ಬಿಜೆಪಿ ಸರಕಾರ ಬಿಡುಗಡೆ ಮಾಡಿದ ಹಣದಿಂದಲೇ ನಗರದ ಅನೇಕ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಈಗಾಗಲೇ ಐಐಟಿ, ಹೈಕೋರ್ಟ್, ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲು ಹಣ ಬಿಡುಗಡೆ ಮಾಡಿದ್ದು ಯಾರು ಎಂಬುದು ಇಡೀ ರಾಜ್ಯದ ಹಾಗೂ ಈ ಭಾಗದ ಜನತೆಗೆ ಗೊತ್ತಿದೆ ಎಂದು ಹೇಳಿದರು.