ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆ: ಯಾಕೆ..ಏನು..? ವಿವರಿಸಿದ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಆಗಸ್ಟ್ 26: ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸಲು ತಮಗೂ ಸೇರಿದಂತೆ ಬಿಜೆಪಿಯ ಪ್ರಮುಖ ಶಾಸಕರಿಗೆ ಕೋಟ್ಯಾಂತರ ರೂಪಾಯಿಯ ಆಮಿಷವೊಡ್ಡಿದ್ದಾರೆ. ಈ ರೀತಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಹಿರಂಗವಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಮುಡಾ, ವಾಲ್ಮೀಕಿ ಹಗರಣಗಳನ್ನು ಮುಚ್ಚಿಹಾಕಲು ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಾಲಿಶತನದ ಮನೋಭಾವ ಇರುವವರನ್ನು ಬಿಟ್ಟು ಕಾಂಗ್ರೆಸ್ನವರು ಆರೋಪ ಮಾಡಿಸುತ್ತಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅವರನ್ನು ಕಾಂಗ್ರೆಸ್ ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರವಿಕುಮಾರ್ ಗಣಿಗ ಮೊದಲ ಬಾರಿ ಶಾಸಕರಿದ್ದಾರೆ. ಯಾರೋ ಹೇಳಿದ್ದಾರೆಂದು ಹೇಳಿಕೆ ಕೊಡಬೇಡಿ ಎಂದು ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರು ಮೊದಲ ಬಾರಿಗೆ ಶಾಸಕರಾದ ರವಿಕುಮಾರ್ ಗಣಿಗ ಅವರಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.
100 ಕೋಟಿ ಆಫರ್ ಮಾಡಿದ್ದಾಗಿ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಆ ಹಣ ಎಲ್ಲಿದೆ ಎಂದು ಹೇಳಲಿ. ಒಬ್ಬಿಬ್ಬರು ಶಾಸಕರು ಹಣ ಪಡೆದರೆ ಏನೂ ಆಗುವುದಿಲ್ಲ. ಬಿಜೆಪಿ 66 ಶಾಸಕರ ಬಲ ಹೊಂದಿದೆ. ಅದರಲ್ಲಿ ಇಬ್ಬರು ಪಕ್ಷದ್ರೋಹ ಮಾಡಿದ್ದಾರೆ. ಇನ್ನೂ 64 ಶಾಸಕರು ಸರ್ಕಾರ ರಚನೆಗೆ ಬೇಕು. ಶಾಸಕರ ಆರೋಪದ ಲೆಕ್ಕಾಚಾರದಂತೆ ಅದಕ್ಕೆ ಅಂದಾಜು 6,600 ಕೋಟಿ ರೂ. ಬೇಕು. ಇಷ್ಟು ಹಣ ಎಲ್ಲಿಂದ ಬರುತ್ತದೆ ? ಬಾಲಿಶತನಕ್ಕೂ ಮಿತಿ ಬೇಕು ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಯಾವ ಮುಖಂಡರು ಹಣಕ್ಕಾಗಿ ಆಫರ್ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸಚಿವ ಪ್ರಹ್ಲಾದ್ ಜೋಶಿ, ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿರುವುದರಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತಿದೆ ಎಂದರು.












Click it and Unblock the Notifications