ಕೋವಿಡ್19: ಟೆಲಿ ಕನ್ಸಲ್ಟೇಷನ್ ಚಿಕಿತ್ಸೆ ಪಡೆಯುವತ್ತ ಜನರ ಒಲವು!
ಧಾರವಾಡ, ಜುಲೈ 11: ಕೊರೊನಾ ವೈರಸ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ಆತಂಕವನ್ನು ಕಡಿಮೆ ಮಾಡುವಂತಹ ಪ್ರಯತ್ನಗಳು ಸರ್ಕಾರದಿಂದ ಆರಂಭವಾಗಿದೆ. ಕೋವಿಡ್ ಸೋಂಕು ಇದ್ದರೂ ಕೂಡ ರೋಗ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣವುಳ್ಳ ಜನರಿಗೆ ತಮ್ಮ ಮನೆಗಳಲ್ಲಿಯೇ ಟೆಲಿ ಕನ್ಸಲ್ಟೇಶನ್ ಮೂಲಕ ಚಿಕಿತ್ಸೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಜನರ ಆತಂಕವೂ ಸೋಂಕಿನ ಬಗ್ಗೆ ತಗ್ಗಲಿಗೆ ಎಂದು ತಜ್ಞರು ಅಂದಾಜಿಸಿದ್ದಾರೆ.
ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿದ ಎರಡನೇ ದಿನ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮತ್ತ 5 ಜನರು ಸ್ವಯಂ ಪ್ರೇರಣೆಯಿಂದ ಈ ಮಾದರಿಯ ಚಿಕಿತ್ಸೆ ಆಯ್ದುಕೊಂಡಿದ್ದಾರೆ.
ದೇಶದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ , ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ರಹಿತರು ಮನೆಗಳಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಸರ್ಕಾರ ನಿಯಮಗಳನ್ನು ರೂಪಿಸಿದೆ.

ಜಿಲ್ಲೆಯಲ್ಲಿ ಈ ಅವಕಾಶ ಜಾರಿಗೊಳಿಸಿದ ನಂತರ ಎರಡು ದಿನಗಳಲ್ಲಿ 17 ಜನರನ್ನು ಹೋಂ ಐಸೋಲೇಷನ್ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಕೋವಿಡ್ ದೃಢಪಟ್ಟ ನಂತರ ವೈದ್ಯರ ತಂಡವು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಂಡು ಶಿಫಾರಸ್ಸು ಮಾಡುತ್ತದೆ. ಅದನ್ನು ಆಧರಿಸಿ ಕ್ರಮ ಜರುಗಿಸಲಾಗುತ್ತದೆ.
ಸಾರ್ವಜನಿಕರು ಕೋವಿಡ್ ಬಗ್ಗೆ ಆತಂಕಕ್ಕೆ ಈಡಾಗಬಾರದು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ, ಪದೇ ಪದೇ ಕೈತೊಳೆಯುವದು ಮತ್ತಿತರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸೋಂಕಿನಿಂದ ದೂರ ಇರಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.












Click it and Unblock the Notifications