ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ, ಕಳಪೆ ಕೆಲಸ ಸಹಿಸಲ್ಲ:ಜೋಶಿ
ಧಾರವಾಡ, ಅಕ್ಟೋಬರ್ 02: ಜಿಲ್ಲೆಯ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ತಂದ ಯೋಜನೆಗಳಲ್ಲಿ ಭ್ರಷ್ಟಾಚಾರ ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಸಂಸದ, ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದರು.
ಭಾನುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಜನರ ಕಲ್ಯಾಣ ಹಾಗೂ ಜಿಲ್ಲೆಯ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಧಾರವಾಡಕ್ಕೆ ಪರಿಚಯಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು. ಯೋಜನೆಗಳಲ್ಲಿ ಭ್ರಷ್ಟಾಚಾರ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ)ಯಡಿ ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
vವರುಣನ ಆರ್ಭಟ ನೂರಕ್ಕೂ ಹೆಚ್ಚು ಕುರಿಗಳ ಸಾವು, ಬಸ್ನಲ್ಲಿ ರಾತ್ರಿ ಕಳೆದ ಮಕ್ಕಳು
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ವಿಚಾರವಾಗಿ ದಿಶಾ ಸಮಿತಿ ಸದಸ್ಯರು ಮಾಹಿತಿ ಕೇಳಿ ಕಚೇರಿಗೆ ಬಂದರೆ, ಅಗತ್ಯ ಮಾಹಿತಿ ನೀಡಬೇಕು. ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮತ್ತು ಉದ್ದಿನ ಕಾಳು ಖರೀದಿ ಕಾರ್ಯ ನಡೆದಿದೆ. ರೈತರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ಮತ್ತು ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಜಲಶಕ್ತಿ, ಜಲಜೀವನ್ ಮಿಷನ್, ಹರ್ಘರ್ ಜಲ್ ಯೋಜನೆಗಳು ಅತ್ಯಂತ ಉತ್ತಮವಾಗಿ ಜಿಲ್ಲೆಯಲ್ಲಿ ಜಾರಿಯಾಗುತ್ತಿದೆ. ಇದರ ಪರಿಣಾಮ ಕುರಿತು ಅಧ್ಯಯನ ಮಾಡಿ ವರದಿ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮುದಾಯ ನಿರ್ಮಾಣ: ಅಸಮಾಧಾನ
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ರೂ.2 ಕೋಟಿ ಬಿಡುಗಡೆ ಆಗಿದ್ದರೂ ಇಲ್ಲಿವರೆಗೂ ಕಾಮಗಾರಿ ಆರಂಭಿಸದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಜುಬ್ಲಿ ಸರ್ಕಲ್ ನಿಂದ ನರೇಂದ್ರ ಕ್ರಾಸ್ವರೆಗಿನ ರಸ್ತೆ ಕಾಮಗಾರಿ, ಬೀದಿ ದೀಪ, ರಸ್ತೆ ವಿಭಜಕ ಮತ್ತು ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆಗಳ ಸಹಾಯಧನ, ಅನುದಾನ ಬಿಡುಗಡೆ ಮಾಡಲು ಬ್ಯಾಂಕ್ನವರು ಸಿವಿಲ್ ಸ್ಕೋರ್ ಕೇಳದಂತೆ ಕೇಂದ್ರ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದ್ದರಿಂದ ಬ್ಯಾಂಕ್ಗಳು ಈ ಕುರಿತು ಜನರಿಗೆ ತಿಳುವಳಿಕೆ ನೀಡಿ, ಫಲಾನುಭವಿಗಳಿಗೆ ವಿಳಂಬ ಮಾಡದೆ ನಿಯಮಾನುಸಾರ ಸಾಲ ಮಂಜೂರು ಮಾಡಬೇಕೆಂದು ಜೋಶಿ ಸೂಚನೆ ನೀಡಿದರು.
ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಗೌನ್ ಧರಿಸದ ಹುಬ್ಬಳ್ಳಿ-ಧಾರವಾಡ ಮೇಯರ್: ವಿವಾದ
ಮಳೆ ಹಾನಿ: ಮನೆ ದುರಸ್ತಿ ಬಗ್ಗೆ ದೂರುಗಳು
ಜಿಲ್ಲೆಯಲ್ಲಿ ಅಮೃತ ಸರೋವರ ಯೋಜನೆ ಅಡಿಯಲ್ಲಿ ಈಗಾಗಲೇ 26 ಕೆರೆ ನಿರ್ಮಾಣ ಕಾರ್ಯ ಆರಂಭವಾಗಿದೆ. 80 ಕೆರೆಗಳ ನಿರ್ಮಾಣ ಹಾಗೂ ಪುನರುಜ್ಜೀವನ ಕಾರ್ಯ ಆರಂಭಿಸಲು ಕ್ರಮ ವಹಿಸಲಾಗಿದೆ. ಇದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದೆ. ಅತೀಯಾದ ಮಳೆಯಿಂದಾಗಿ ಅನೇಕ ಜನರ ಮನೆಗಳಿಗೆ ಹಾನಿಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಗುತ್ತಿಲ್ಲ ಎಂದು ಶಾಸಕರಿಂದ ಮತ್ತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದರ ಕುರಿತು ರಾಜ್ಯದ ವಸತಿ ಸಚಿವರ ಹಾಗೂ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್, ಹಿರಿಯ ಅಧಿಕಾರಿಗಳ ಸಭೆಯನ್ನು ಬರುವ ನವೆಂಬರ್ 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಲಘಟಗಿ ತಹಶೀಲ್ದಾರ್ಗೆ ಜೋಶಿ ಎಚ್ಚರಿಕೆ
ಕಲಘಟಗಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸಾರ್ವಜನಿಕರಿಂದ ಸಂಸದರ ಕಚೇರಿಗೆ ದೂರುಗಳು ಬರುತ್ತಿವೆ. ಭ್ರಷ್ಟಾಚಾರ ನಿಯಂತ್ರಿಸದಿದ್ದರೆ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಲಘಟಗಿ ತಹಶೀಲ್ದಾರ್ ಅವರಿಗೆ ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2016-17 ರಿಂದ 2022-23 ರ ವರೆಗೆ 4639 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. 4344 ಮನೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಈಗ 3548 ಮನೆಗಳ ನಿರ್ಮಾಣವಾಗಿದ್ದು, ಶೇ.81.68 ಭೌತಿಕ ಪ್ರಗತಿಯಾಗಿದೆ. ಇನ್ನು 796 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣ ಗುರಿ ಸಾಧಿಸಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಸಚಿವರು ತಿಳಿಸಿದರು.
ಉದ್ಯೋಗ ಬೇಡಿಕೆ ಈಡೇರಿಕೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1,65,547 ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ಸುಮಾರು 47,180 ಫಲಾನುಭವಿಗಳಿಂದ ಉದ್ಯೋಗ ಬೇಡಿಕೆ ಬಂದಿತ್ತು. 46,078 ಉದ್ಯೋಗ ಚೀಟಿದಾರರಿಗೆ ಉದ್ಯೋಗ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಜನಾಂಗದ ಫಲಾನುಭವಿಗಳು ಉದ್ಯೋಗ ಅರಸಿ, ವಲಸೆ ಹೋಗುವ ಸಾಧ್ಯತೆ ಇದೆ. ಈ ಕುರಿತು ಅಧಿಕಾರಿಗಳು ಜಾಗೃತಿವಹಿಸಿ, ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಸ್ಥಳದಲ್ಲಿ ಉದ್ಯೋಗ ದೊರೆಯುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.