ಹುಬ್ಬಳ್ಳಿ ಧಾರವಾಡದಲ್ಲಿ ನೀರಿನ ಸಮಸ್ಯೆ ಕುರಿತು ದೂರು ಅಮ್ಮಿನಬಾವಿ ಘಟಕಕ್ಕೆ ಮೇಯರ್ ಭೇಟಿ
ಧಾರವಾಡ, ಸೆ.27: ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಸರಬರಾಜು ಅಭಿವೃದ್ಧಿ ಯೋಜನೆಯಡಿಯಲ್ಲಿ ಅಮ್ಮಿನಬಾವಿಯಲ್ಲಿ ನಿರ್ಮಿಸಲಾಗಿರುವ ಜಲಶುದ್ಧಿಕರಣ ಹಾಗೂ ಸರಬರಾಜು ಘಟಕಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೇಯರ್ ಈರೇಶ ಅಂಚಟಗೇರಿ ಜೊತೆಗೆ ಆಯುಕ್ತರಾದ ಡಾ.ಗೋಪಾಲಕೃಷ್ಣ ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿ ಎಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಜಲಶುದ್ಧಿಕರಣ ಹಾಗೂ ಸರಬರಾಜು ಘಟಕದ ಬಗ್ಗೆ ಚರ್ಚಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸುಧಾ ಮೂರ್ತಿ ನೀಡಿದ ಉಡುಗೊರೆ ಏನು?
ಕಳೆದ ಕೆಲ ದಿನಗಳಿಂದ ಅವಳಿ ನಗರಗಳಲ್ಲಿ ಹಾಗೂ ಸುತ್ತಲಿನ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಅಮ್ಮಿನಬಾವಿ ಘಟಕಕ್ಕೆ ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, "ನೀರು ಸರಬರಾಜು ಘಟಕವನ್ನು ಎಲ್ ಅಂಡ್ ಟಿ ಸಂಸ್ಥೆಗೆ ಹಸ್ತಾಂತರಿಸಿದ್ದು, 2030 ರವರೆಗೆ ಗುತ್ತಿಗೆ ಪಡೆದಿದೆ. ಆದರೆ ಇತ್ತೀಚಿನ ಕೆಲದಿನಗಳಿಂದ ಹುಬ್ಬಳ್ಳಿ ಧಾರವಾಡ ಟ್ಯಾಂಕ್ಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೇ ಕೆಲವೆಡೆ ನೀರು ಪೋಲಾಗುತ್ತಿರುವ ಬಗ್ಗೆ ಸಾಕಾಷ್ಟು ದೂರುಗಳು ಬಂದಿದೆ" ಎಂದು ತಿಳಿಸಿದ್ದಾರೆ.
40 ಎಂಎಲ್ಡಿ ಹಾಗೂ 40 ಎಂಎಲ್ಡಿ ಘಟಕಗಳು ಸ್ಥಾಪನೆಯಾದಾಗ ಕನಿಷ್ಠ ನಾಲ್ಕು ದಿನಗಳಿಗೊಮ್ಮೆಯಾದರೂ ನೀರು ಸರಬರಾಜು ಆಗುತ್ತಿತ್ತು. ಹೀಗಾಗಿ 80 ಎಂಎಲ್ಡಿ ಘಟಕ ಸ್ಥಾಪನೆಯಾಗಿ 25 ವಾರ್ಡ್ಗಳಿಗೆ 24x7 ನೀರು ಸರಬರಾಜು ಆಗಬೇಕಿತ್ತು. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಒಟ್ಟಾರೆ ಸರಬರಾಜು ವ್ಯವಸ್ಥೆಯ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಎಲ್ ಅಂಡ್ ಟಿ ಸಂಸ್ಥೆ ವಹಿಸಿಕೊಳ್ಳಬೇಕಾಗುತ್ತದೆ. ತಕ್ಷಣವೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಎಂಜಿನಿಯರ್ಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಗೋಪಾಕೃಷ್ಣ ಬಿ ಮಾತನಾಡಿ, ಹಳೆಹುಬ್ಬಳ್ಳಿಯಲ್ಲಿ 82 ವಾರ್ಡ್ಗಳಲ್ಲಿ 220 ಎಂಎಲ್ಡಿ ನೀರು ಸರಬರಾಜು ಆಗುತ್ತಿದೆ. 11 ವಾರ್ಡ್ಗಳಲ್ಲಿ 24x7 ನಿರಂತರ ನೀರು ಸರಬರಾಜು ಆಗುತ್ತಿದೆ. 25 ವಾರ್ಡ್ಗಳಲ್ಲಿ ಪ್ರತಿನಿತ್ಯ ನಾಲ್ಕು ಐದು ಗಂಟೆ ನೀರು ಸರಬರಾಜು ಆಗುತ್ತಿದೆ. ಉಳಿದ 46 ವಾರ್ಡ್ಗಳಲ್ಲಿ ನೀರು ಸತತವಾಗಿ ದೊರೆಯುವಂತೆ ಎಚ್ಚರ ವಹಿಸಲಾಗಿದೆ. ನವನಗರ ಹಾಗೂ ಹಳೆಹುಬ್ಬಳ್ಳಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.