"ಬಿಜೆಪಿಯವರು ಮೊದಲು ಟಿಪ್ಪು ಇತಿಹಾಸವನ್ನು ಓದಿಕೊಳ್ಳುವುದು ಒಳಿತು"
ಧಾರವಾಡ, ಅಕ್ಟೋಬರ್ 30: "ಟಿಪ್ಪು ಜಯಂತಿ ಮತ್ತು ಟಿಪ್ಪು ಬಗ್ಗೆ ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುತ್ತಿರುವ ಬಿಜೆಪಿಯವರು ಮೊದಲು ಟಿಪ್ಪು ಇತಿಹಾಸವನ್ನು ಓದಿಕೊಳ್ಳುವುದು ಒಳಿತು" ಎಂದು ಮಾಜಿ ಸಚಿವ- ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ ಬುಧವಾರ ಧಾರವಾಡದಲ್ಲಿ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಪ್ರೇಮಿ, ಕನ್ನಡದ ಅಭಿಮಾನಿ, ತಂತ್ರಜ್ಞಾನ- ವಿಜ್ಞಾನವನ್ನು ಅಂದಿನ ಸಂದರ್ಭದಲ್ಲೇ ಹೆಚ್ಚು ಅರಿತವರು. ಟಿಪ್ಪು ಇತಿಹಾಸ ಬಹು ದೊಡ್ಡದು. ತನ್ನದೇ ನಾಡು ಕಟ್ಟಿ ಬೆಳೆಸುವಾಗ ಕೆಲ ವಿವಾದಗಳು ಆಗಿರಬಹುದು. ಆದರೆ ರಾಜಕೀಯ ಕಾರಣಕ್ಕಾಗಿ ಬಿಜೆಪಿಯು ಟಿಪ್ಪು ಬಗ್ಗೆ ತೆಗೆದುಕೊಂಡ ನಿರ್ಣಯ ಖಂಡನಾರ್ಹ. ಬಿಜೆಪಿ ಸರ್ಕಾರ ವಿವಾದಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಟಿಪ್ಪು ಬಗ್ಗೆ ಓದಿಕೊಳ್ಳಬೇಕು ಎಂದಿದ್ದಾರೆ.
ಇನ್ನು ಚಿನ್ನದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ವಿಚಾರವನ್ನು ಸ್ವಾಗತಿಸಿದ ಅವರು, ಚಿನ್ನ- ಬೆಳ್ಳಿ ಯಾವುದೇ ಇರಲಿ ಅಕ್ರಮವಾಗಿ ಹೊಂದಲೇಬಾರದು. ಆದರೆ ಕಾನೂನುಗಳನ್ನು ಮಾಡಿ, ತಪ್ಪು ಬಳಕೆ ಆಗಬಾರದು ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರ, ಹರ್ಯಾಣ ಹೇಗಾಯಿತು, ಅದೇ ರೀತಿಯ ಆಶ್ಚರ್ಯಕರ ಫಲಿತಾಂಶ ನಮ್ಮ ರಾಜ್ಯದ ಉಪಚುನಾವಣೆಯಲ್ಲಿ ಬರಲಿದೆ. ಪ್ರವಾಹ ಪೀಡಿತ ಪ್ರದೇಶದ ಜನ ಬಿಜೆಪಿ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ. ಅಲ್ಲದೇ ಮಹಾದಾಯಿ ವಿಷಯದಲ್ಲಿ ಪ್ರಧಾನಿ ವಚನ ಭ್ರಷ್ಟ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿವಾಧ ಕುರಿತಂತೆ ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು, ಗಡಿನಾಡು ಕನ್ನಡಿಗರ ಹೆಸರಿನಲ್ಲಿ ತಮಗೆ ಯಾರು ಬೇಕೋ ಅವರಿಗೆ ಕೊಟ್ಟಿದ್ದಾರೆ. ಅವರದೇ ಪಕ್ಷದವರು ಇದನ್ನು ಎತ್ತಿ ತೋರಿಸಿದ್ದಾರೆ ಎಂದಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಇದ್ದವರೇ ನಾನು ಐದು ಕೊಡಿಸಿದೇನಿ ಅಂತ ಹೇಳಿಕೊಂಡಿದ್ದಾರೆ. ಪ್ರಶಸ್ತಿ ಪಡೆದವರ ಬಗ್ಗೆ ನಮ್ಮದು ಅಗೌರವ ಇಲ್ಲ. ಆದರೆ ಆ ಐವರು ಯಾರ ಯಾರು ಅನ್ನೋದನ್ನು ಸಂಸ್ಕೃತಿ ಇಲಾಖೆ ಸಚಿವರು ಸಾರ್ವಜನಿಕವಾಗಿ ಹೇಳಬೇಕು. ಇಲ್ಲದೇ ಹೋದಲ್ಲಿ ಎಲ್ಲ ಆರವತ್ತು ಜನ ಪುರಸ್ಕೃತರಿಗೆ ನೋವು ಮಾಡಿದಂತೆ ಆಗುತ್ತದೆ ಎಂದು ಎಚ್. ಕೆ. ಪಾಟೀಲ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications