ನಾನು ಚುನಾವಣೆಗೆ ನಿಲ್ತೇನೆ, ಆದರೆ ಎದುರಾಳಿ ಬೇಡ:ಪ್ರಥಮ್
Recommended Video

ಧಾರವಾಡ, ಜನವರಿ 11: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಚುನಾವಣೆಗೆ ಸ್ಪರ್ಧಿಸುತ್ತಾರಂತೆ. ಹೊಸ ಕ್ಷೇತ್ರ ಹನೂರಿನಿಂದ ಅವರು ಟಿಕೆಟ್ ಆಕಾಂಕ್ಷಿ ಆದರೆ ಅವರ ವಿರುದ್ಧ ಯಾರೂ ಸ್ಪರ್ಧೆ ಮಾಡಬಾರದಂತೆ ಹೀಗೆಂದು ಸ್ವತಃ ಪ್ರಥಮ್ ಹೇಳಿದ್ದಾರೆ.
ಹೊಸ ಕ್ಷೇತ್ರ ಹನೂರಿನಿಂದ ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯ ಬರುತ್ತಿದೆ, ನಾನು ಟಿಕೆಟ್ ಆಕಾಂಕ್ಷಿ ಕೂಡ. ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಸಿಎಂ ಅವರ ಬಳಿ ಮಾತನಾಡಿದ್ದೇನೆ, 'ನೀವು ನಿಮ್ಮ ಪಕ್ಷದ ಅಭ್ಯರ್ಥಿಯನ್ನು ನನ್ನ ಎದುರು ಕಣಕ್ಕಿಳಿಸಬೇಡಿ ಆಗ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದೇನೆ, ಆದ್ರೆ ಅವರ ಬಳಿ ಟಿಕೆಟ್ ಕೇಳಿಲ್ಲ' ಎಂದು ಪ್ರಥಮ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನಾನು ಕೋತಿ ನನ್ ಮಗ ಇರಬಹುದು ಆದರೆ ಕಳ್ಳ ನನ್ ಮಗ ಅಲ್ಲ' ಎಂದು ತಮ್ಮನ್ನು ತಾವೇ ವಿಡಂಬಿಸಿಕೊಂಡು ನಾನು ರಾಜಕೀಯಕ್ಕೆ ತಕ್ಕ ವ್ಯಕ್ತಿ ಎಂದು ಅವರು ಹೇಳಿದರು.
ನನಗೆ ಸಿನಿಮಾಗಿಂತಲೂ ರಾಜಕೀಯವೇ ಹೆಚ್ಚು ಆಸಕ್ತಿಯ ಕ್ಷೇತ್ರ ಎಂದ ಅವರು, ಯಾವ ಪಕ್ಷ ಟಿಕೆಟ್ ಕೊಟ್ಟರೂ ಸರಿ ಇಲ್ಲವಾದರೆ ಪಕ್ಷೇತರವಾಗಿಯಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

ಜಿಗ್ನೇಶ್ ಮೆವಾನಿ ಆದರ್ಶ ಅಲ್ಲ
ಮುಸ್ಲಿಂರಿಗೆ ಅಬ್ದುಲ್ ಕಲಾಂ ಆದರ್ಶವಾಗಬೇಕು ಯಾವನೋ ತಿಪ್ಪೆ ಸುಲ್ತಾನ ಆದರ್ಶವಾಗೋದು ಬೇಡ ಎನ್ನುವ ಮೂಲಕ ಟಿಪ್ಪು ಸುಲ್ತಾನ್ ರನ್ನು ತಿಪ್ಪೆಗೆ ಹೋಲಿಸಿದರು ಪ್ರಥಮ್. ಅಷ್ಟಕ್ಕೆ ಸುಮ್ಮನಾಗದೇ ನನಗೆ ಟಿಪ್ಪು ಯಾರೋ ಗೊತ್ತೇ ಇಲ್ಲ ಎಂದರು. ದಲಿತರಿಗೆ ಅಂಬೇಡ್ಕರ್ ಆದರ್ಶವಾಗಬೇಕೇ ಹೊರತು ಜಿಗ್ನೇಶ್ ಮೆವಾನಿ ಅಲ್ಲ ಎಂದರು.

ಬಹುಸಂಖ್ಯಾತರ ಭಾವನೆಗೆ ಗೌರವ ಇಲ್ಲ
ಬಹುಸಂಖ್ಯಾತರ ಭಾವನೆ ವಿರೋಧಿಸಿ ಟಿಪ್ಪು ಜಯಂತಿ ಮಾಡುತ್ತಿರುವುದು ಏಕೆ, ಟಿಪ್ಪು ಜಯಂತಿ ಮಾಡುವ ಸರ್ಕಾರ ವಿವೇಕಾನಂದರ ಜಯಂತಿಯನ್ನೂ ಮಾಡಬೇಕು ಎಂದು ಹೇಳಿದ ಪ್ರಥಮ್ ಟಿಪ್ಪು ಯಾವನೋ ನಂಗೆ ಗೊತ್ತಿಲ್ಲ ಎಂದು ಏಕವಚನದಲ್ಲಿ ಮಾತನಾಡಿದರು.

ಸಂಘಟನೆ ಗುರಿ ಮಾಡೋದು ಬೇಡ
ಕೋಮು ಗಲಭೆಯಿಂದ ಸಾವಾಗಬಾರದು, ಸಾವು ತಾನಾಗಿಯೇ ಬರಬೇಕು ಎಂದು ಪ್ರಥಮ್ ಹೇಳಿದರು. ಭಯ ಸೃಷ್ಟಿಸುವ ವಾತಾವರಣ ಬೇಡ, ಈ ಹತ್ಯೆಗಳನ್ನೆಲ್ಲ ನಾವು ಖಂಡಿಸಲೇಬೇಕು, ಹತ್ಯೆ ಯಾರೇ ಮಾಡಿದ್ದರೂ, ಮಾಡಿದವನು ಅಯೋಗ್ಯ ಅದಕ್ಕಾಗಿ ಯಾವುದೋ ಸಂಘಟನೆ ಗುರಿ ಮಾಡೋದು ಬೇಡ ಎಂದರು.

ಕರಾವಳಿ ವಿಷಯದಲ್ಲಿ ಸರ್ಕಾರ ಎಡವಿದೆ.
ಹನೂರು ತಾಲ್ಲಕಾಗಬೇಕು ಎಂಬ ಒತ್ತಾಯ ಬಹುದಿನಗಳಿಂದ ಇತ್ತು, ಜನರಿಗೆ ಸ್ಪಂದಿಸಿ ಹನೂರನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಿದ ಸಿಎಂಗೆ ಅಭಿನಂಧನೆಗಳು, ಅವರು ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದಾರೆ, ಕೊಟ್ಟಿರುವ ಎಲ್ಲಾ ಭಾಗ್ಯಗಳೂ ಚೆನ್ನಾಗಿವೆ, ಆದರೆ ಕರಾವಳಿ ಭಾಗದ ವಿಷಯ ನೋಡಿದಾಗ ಸರ್ಕಾರ ವಿಫಲವಾಗಿದೆ ಎನ್ನಿಸುತ್ತೆ ಎಂದು ಸರ್ಕಾರವನ್ನು ಪ್ರಥಮ್ ವಿಮರ್ಶೆ ಮಾಡಿದರು.












Click it and Unblock the Notifications