ಜನಪ್ರತಿನಿಧಿಗಳಿಗೆ 15 ದಿನಕ್ಕೊಮ್ಮೆ ನೀರು ಕೊಡಿ : ಖೇಣಿ ಕಿಡಿ
ಹುಬ್ಬಳ್ಳಿ, ಅಕ್ಟೋಬರ್ 05 : ರಾಜ್ಯದ ಎಲ್ಲ ಜನಪ್ರತಿನಿಧಿಗಳಿಗೆ 15 ದಿನಕ್ಕೊಮ್ಮೆ ನೀರಿನ ಸೌಲಭ್ಯ ನೀಡಬೇಕು. ಆಗ ಮಾತ್ರ ಅವರಿಗೆ ಉತ್ತರ ಕರ್ನಾಟಕದ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಮತ್ತು ರೈತರು ಅನುಭವಿಸುತ್ತಿರುವ ತೊಂದರೆಯ ಅರಿವಾಗುತ್ತದೆ ಎಂದು ಮಕ್ಕಳ ಪಕ್ಷದ ನಾಯಕ ಅಶೋಕ್ ಖೇಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜಯಮೃತ್ಯುಂಜಯ ಸ್ವಾಮಿಗಳ ಸಮ್ಮುಖದಲ್ಲಿ 66ನೇ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿಕೊಂಡ ಉದ್ಯಮಿ ಅಶೋಕ್ ಖೇಣಿ, ಕಳಸಾ-ಬಂಡೂರಿ ಸಮಸ್ಯೆ ಪರಿಹಾರಕ್ಕೆ ತಾವೇ ಸಮಿತಿ ರಚಿಸಲು ಮುಂದಾಗಿದ್ದಾರೆ. [ಅಮ್ಮಾ,, ನಮ್ಮೂರಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡ್ತಾರೆ?]

"ರಾಜ್ಯದ ಸ್ವಾಮೀಜಿಗಳು, ಕಾನೂನು ತಜ್ಞರು ಮತ್ತು ವೈದ್ಯರನ್ನು ಸೇರಿಸಿ ನಾನೇ ಒಂದು ಸಮಿತಿಯನ್ನು ರಚಿಸುತ್ತೇನೆ. ಒಂದು ತಿಂಗಳು ಗಡುವಿನಲ್ಲಿ ಆ ಸಮಿತಿಯು ಮಹಾದಾಯಿ ಮತ್ತು ಕಳಸಾ-ಬಂಡೂರಿ ಕುರಿತು ವಾಸ್ತವಿಕ ವರದಿ ತಮಗೆ ನೀಡುತ್ತದೆ" ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿರುವ ಖೇಣಿ ಅವರು ವಿವರಿಸಿದರು.
ಸಮಿತಿಯು ನೀಡಿದ ವರದಿಯನ್ನು ತಾವು ಎರಡೂ ರಾಜ್ಯಗಳ (ಕರ್ನಾಟಕ ಮತ್ತು ಗೋವಾ) ಮುಖ್ಯಮಂತ್ರಿಗಳಿಗೆ ಮುಂದಿನ ಕ್ರಮ ಕೈಗೊಳ್ಳಲು ನೀಡಲಿದ್ದೇನೆ ಎಂದರು. ಅಕ್ಟೋಬರ್ 10ರಂದು ಕಳಸಾ-ಬಂಡೂರಿ ತಡೆಗೋಡೆಯನ್ನು ಒಡೆಯಲು ಮುಂದಾಗಿರುವ ಹೋರಾಟಗಾರರು ಇನ್ನಷ್ಟು ದಿನ ಕಾಯಬೇಕು ಎಂದು ಕಿವಿಮಾತು ಹೇಳಿದರು. [ಏನಿದು ಕಳಸಾ-ಬಂಡೂರಿ ಯೋಜನೆ?]
ಸರಕಾರ ಮೂರು ತಿಂಗಳಲ್ಲಿ ಈ ಬಿಕ್ಕಟ್ಟು ಬಗೆಹರಿಸಬೇಕು ಎಂದೂ ಅವರು ಆಗ್ರಹಿಸಿದರು. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನದಿ ನೀರನ್ನು ಮಲಪ್ರಭಾಗೆ ತಿರುಗಿಸುವ ಯೋಜನೆಗಾಗಿ ಉತ್ತರ ಕರ್ನಾಟಕದ ಜನರು ಕಳೆದ ಮೂರು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. (ಚಿತ್ರ: ಕಿರಣ ಸ್ಟುಡಿಯೋ, ಹುಬ್ಬಳ್ಳಿ)












Click it and Unblock the Notifications