ಅಂಗನವಾಡಿ ಕಾರ್ಯಕರ್ತೆ ಪುತ್ರನ ಡಾಕ್ಟರ್ ಕನಸು ನನಸು
ಧಾರವಾಡ, ಡಿಸೆಂಬರ್ 16: ವೈದ್ಯಕೀಯ ಸೀಟು ಪಡೆಯಬೇಕು ಎಂಬ ಅಂಗನವಾಡಿ ಕಾರ್ಯಕತೆ ಪುತ್ರನ ಕನಸು ನನಸಾಗಿದೆ. ಧಾರವಾಡ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕುಟುಂಬವನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶೈಲಜಾ ಹೂಗಾರ ಹಾಗೂ ನಿಜಗುಣೇಶ ಹೂಗಾರ ದಂಪತಿಗಳ ಪುತ್ರ ಸಿದ್ಧಲಿಂಗೇಶ ಅವರಿಗೆ ಮೆಡಿಕಲ್ ಸೀಟು ಸಿಕ್ಕಿದೆ.
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಸಿಕ್ಕಿದ್ದು, ವೈದ್ಯನಾಗಬೇಕು ಎಂಬ ಕನಸು ಈಡೇರಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ಡಾ. ಬಿ. ಸುಶೀಲಾ ತಮ್ಮ ಕಚೇರಿಯಲ್ಲಿ ಕುಟುಂಬವನ್ನು ಸನ್ಮಾನಿಸಿದರು.

ಜವಾಹರ ನವೋದಯ ವಿದ್ಯಾಲಯದಲ್ಲಿ ಎಸ್ಎಸ್ಎಲ್ಸಿ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿಯನ್ನು ಶೇ 94.25 ಅಂಕಗಳೊಂದಿಗೆ ಸಿದ್ಧಲಿಂಗೇಶ ಪೂರ್ಣಗೊಳಿಸಿದ್ದಾರೆ.

ನೀಟ್ ಪ್ರವೇಶ ಪರೀಕ್ಷೆಯಲ್ಲಿ 967 ನೇ rank ಪಡೆದು ವೈದ್ಯಕೀಯ ಸೀಟನ್ನು ಪಡೆದಿದ್ದಾರೆ. ಕುಂದಗೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ವಿದ್ಯಾರ್ಥಿಯ ಮೊದಲ ವರ್ಷದ ಎಂಬಿಬಿಎಸ್ ಪಠ್ಯಪುಸ್ತಕ, ಎಪ್ರಾನ್, ಸ್ಟೆತೋಸ್ಕೋಪ್ ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.












Click it and Unblock the Notifications