ಅಮೃತ್ ಭಾರತ್ ಯೋಜನೆ; ಧಾರವಾಡದ 2 ರೈಲು ನಿಲ್ದಾಣ ಅಭಿವೃದ್ಧಿ
ಧಾರವಾಡ, ಆಗಸ್ಟ್ 01; ಕೇಂದ್ರ ರೈಲ್ವೆ ಸಚಿವಾಲಯವು 'ಅಮೃತ್ ಭಾರತ್ ಸ್ಟೇಷನ್' ಎಂಬ ಹೆಸರಿನ ರೈಲು ನಿಲ್ದಾಣಗಳ ಆಧುನೀಕರಣಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 6ರಂದು ಚಾಲನೆ ನೀಡಲಿದ್ದಾರೆ. ಈ ಯೋಜನೆಗೆ ಧಾರವಾಡದ ಎರಡು ರೈಲು ನಿಲ್ದಾಣಗಳು ಆಯ್ಕೆಯಾಗಿವೆ.
ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದ್ದಾರೆ. ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಅವರು, 'ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಅನೇಕ ರೈಲು ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಅದರಲ್ಲಿ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಅಳ್ನಾವರ ಹಾಗೂ ಧಾರವಾಡ ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣಗಳನ್ನಾಗಿ ಗುರುತಿಸಲಾಗಿದೆ' ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 52 ನಿಲ್ದಾಣಗಳಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ 45 ನಿಲ್ದಾಣಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. 16 ನಿಲ್ದಾಣಗಳು ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿವೆ. ಹುಬ್ಬಳ್ಳಿ ರೈಲ್ವೆ ವಿಭಾಗದ 16 ನಿಲ್ದಾಣಗಳ ಪೈಕಿ 6 ನಿಲ್ದಾಣಗಳಲ್ಲಿ ಆಗಸ್ಟ್ 6ರಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಡಿಗಲ್ಲು ಹಾಕಲಿದ್ದಾರೆ. ಇದರಲ್ಲಿ ನಮ್ಮ ಧಾರವಾಡ ಲೋಕಸಭಾ ವ್ಯಾಪ್ತಿಯ ಅಳ್ನಾವರ ರೈಲು ನಿಲ್ದಾಣವು ಒಂದಾಗಿದ್ದು ನಮಗೆ ಹೆಮ್ಮೆಯ ಮತ್ತು ಹರ್ಷದ ವಿಷಯ ಎಂದು ಜೋಶಿ ತಿಳಿಸಿದ್ದಾರೆ.
ಏನಿದು ಅಮೃತ್ ಭಾರತ್ ಯೋಜನೆ; ಈ ಯೋಜನೆಯಡಿ ರೈಲು ನಿಲ್ದಾಣದಲ್ಲಿ ಕನಿಷ್ಠ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಆದರ್ಶ ನಿಲ್ದಾಣಗಳನ್ನಾಗಿ ಮಾಡುವ ಯೋಜನೆ ಇದೆ. ಈ ನಿಲ್ದಾಣಗಳು ಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಇನ್ಫೋಟೈನ್ಮೆಂಟ್ ಮತ್ತು ವಿರಾಮವನ್ನು ಉತ್ತೇಜಿಸುವ ನಗರ ಕೇಂದ್ರಗಳಾಗಿ ಹೊರಹೊಮ್ಮಬೇಕು ಎಂಬುದು ಪ್ರಧಾನಿಯವರ ದೂರದೃಷ್ಟಿಯಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಮೃತ ಭಾರತ ರೈಲು ನಿಲ್ದಾಣಗಳ ಯೋಜನೆಯನ್ವಯ ಅಳ್ನಾವರ ನಿಲ್ದಾಣ ಸುಸಜ್ಜಿತವಾಗಲಿದ್ದು, ಗ್ರಾನೈಟ್ ಫ್ಲೋರಿಂಗ್, ಫುಟ್ ಓವರ್ ಬ್ರಿಡ್ಜ್, ಎಸ್ಕಲೇಟರ್, ಹೊಸ ವೈಟಿಂಗ್ ಹಾಲ್ ಮುಂತಾದ ಹಲವಾರು ಕಾಮಗಾರಿಗಳು ಸೇರಿದಂತೆ ಹೊಸ ಸೌಲಭ್ಯಗಳು ಈ ನಿಲ್ದಾಣಕ್ಕೆ ಲಭ್ಯವಾಗಲಿದೆ.
ನಮ್ಮ ಅಳ್ನಾವರ ರೈಲು ನಿಲ್ದಾಣವನ್ನು ಅಮೃತ ಭಾರತ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧಾರವಾಡ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳು ಎಂದು ಜೋಶಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಯೋಜನೆಯ ಉದ್ದೇಶಗಳು
* ಈ ಯೋಜನೆಯು ರೈಲು ನಿಲ್ದಾಣಗಳ ಮಾಸ್ಟರ್ ಪ್ಲಾನ್ಗಳನ್ನು ಸಿದ್ಧಪಡಿಸುವುದು ಮತ್ತು ಕನಿಷ್ಠ ಅಗತ್ಯ ಸೌಕರ್ಯಗಳು ಸೇರಿದಂತೆ ಮತ್ತು ಅದರಾಚೆಗೆ ಸೌಲಭ್ಯಗಳನ್ನು ಹೆಚ್ಚಿಸಲು ಹಂತಗಳಲ್ಲಿ ಮಾಸ್ಟರ್ ಪ್ಲಾನ್ ಅನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ದೀರ್ಘಾವಧಿಯಲ್ಲಿ ನಿಲ್ದಾಣದಲ್ಲಿ ರೂಫ್ ಪ್ಲಾಜಾಗಳು ಮತ್ತು ನಗರ ಕೇಂದ್ರಗಳನ್ನು ರಚಿಸುವ ಗುರಿಯನ್ನು ಹೊಂದಿದೆ.
* ಈ ಯೋಜನೆಯು ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಹೊಸ ಸೌಕರ್ಯಗಳ ಪರಿಚಯ ಮತ್ತು ಅಸ್ತಿತ್ವದಲ್ಲಿರುವ ಸೌಕರ್ಯಗಳ ಉನ್ನತೀಕರಣ ಮಾಡಲಾಗುತ್ತದೆ.
* ಯೋಜನೆಯು ವಿವರವಾದ ತಾಂತ್ರಿಕ, ಆರ್ಥಿಕ ಕಾರ್ಯಸಾಧ್ಯತೆಯ ಅಧ್ಯಯನಗಳನ್ನು ನಡೆಸಿದ ಅಥವಾ ನಡೆಸಲಾಗುತ್ತಿರುವ ನಿಲ್ದಾಣಗಳನ್ನು ಸಹ ಒಳಗೊಂಡಿದೆ. ಆದರೆ ರೂಫ್ ಪ್ಲಾಜಾಗಳ ನಿರ್ಮಾಣದ ಕೆಲಸವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ, ಮಾಸ್ಟರ್ ಪ್ಲ್ಯಾನ್ ಹಂತಹಂತವಾಗಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದೆ.
* ಈ ಯೋಜನೆಯು ಅನಗತ್ಯ/ ಹಳೆಯ ಕಟ್ಟಡಗಳನ್ನು ಸ್ಥಳಾಂತರಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರ ಸಂಬಂಧಿತ ಚಟುವಟಿಕೆಗಳಿಗೆ ಸ್ಥಳವನ್ನು ಮೀಸಲಿಡಲಾಗುತ್ತದೆ. ಹೊಸ ಕಟ್ಟಡ ನಿರ್ಮಾಣ, ಕಾಯುವ ಹಾಲ್ಗಳ ಗಾತ್ರವನ್ನು ಹೆಚ್ಚಿಸುವುದು ಇದರಲ್ಲಿ ಸೇರಿದೆ.
* ಮಹಿಳೆಯರು ಮತ್ತು ದಿವ್ಯಾಂಗರಿಗೆ ಪ್ರತ್ಯೇಕ, ಸಾಕಷ್ಟು ಸಂಖ್ಯೆಯ ಶೌಚಾಲಯಗಳನ್ನು ಒದಗಿಸುವುದು.












Click it and Unblock the Notifications