ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
ಧಾರವಾಡದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣವಾಗುತ್ತಿದ್ದು, ಈ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಹಾಗಾದರೆ ಧಾರವಾಡದಲ್ಲಿ ಪೊಲೀಸ್ ಬಿಗಿ ಭದ್ರತೆ ಹೇಗಿದೆ ನೋಡಿ.
ಧಾರವಾಡ, ಜನವರಿ, 27: ವಿದ್ಯಾಕಾಶಿ ಧಾರವಾಡದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣವಾಗುತ್ತಿದ್ದು, ಇದು ಧಾರವಾಡದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ. ಶನಿವಾರ (ಜನವರಿ 28) ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕ್ಯಾಂಪಸ್ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಚಾಣಕ್ಯ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಧಾರವಾಡದ ಕೃಷಿ ವಿವಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಕೃಷಿ ವಿವಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮವನ್ನು ಕೃಷಿ ವಿವಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ವೇದಿಕೆ ಕಾರ್ಯಕ್ರಮವನ್ನು ರೈತರ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಈ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ 1350 ಜನ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದ್ದು, ಸಭಾಭವನವನ್ನು ಸಿಆರ್ಪಿಎಫ್ ತಂಡದವರು ಪರೀಶೀಲನೆ ನಡೆಸಿದರು.

ಪೊಲೀಸ್ ತನಿಖೆಗೆ 10 ಪಟ್ಟು ಉಪಯೋಗ
ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಇಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣ ಆಗುವುದರಿಂದ ಪೊಲೀಸ್ ತನಿಖೆಗೆ 10 ಪಟ್ಟು ಉಪಯೋಗವಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ತಿಳಿಸಿದರು. ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದ ವೇದಿಕೆ ಹಾಗೂ ಭೂಮಿಪೂಜೆ ನಡೆಸಲಾಗುವ ಸ್ಥಳವನ್ನು ಪರಿಶೀಲನೆ ನಡೆಸಿ, ಕ್ಯಾಂಪಸ್ ನಿರ್ಮಾಣವಾದ ನಂತರ ದೊಡ್ಡ ಕಾರ್ಯಕ್ರಮ ಇಟ್ಟುಕೊಳ್ಳಲಾಗುವುದು. ಆದ್ದರಿಂದ ಸದ್ಯ ವೇದಿಕೆ ಕಾರ್ಯಕ್ರಮವನ್ನು ರೈತರ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅರ್ಧ ಗಂಟೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಂತರ ಅಮಿತ್ ಶಾ ಅವರು ಕುಂದಗೋಳಕ್ಕೆ ತೆರಳಲಿದ್ದಾರೆ ಎಂದರು.
ಒಟ್ಟಾರೆ ನಾಳೆ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡು ಗೃಹ ಸಚಿವ ಆಗಮನಕ್ಕಾಗಿ ಕಾಯಲಾಗುತ್ತಿದೆ.

ಅಮೃತ ಮಹೋತ್ಸವ ಆಚರಣೆಗೆ ಸಿದ್ಧತೆ
ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಕೆಎಲ್ಇ ಬಿವ್ಹಿಬಿ ಅಮೃತ ಘಳಿಗೆಗೆ ಸನ್ನದ್ಧವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಸಕಲ ಸಿದ್ದತೆ ಮಾಡಲಾಗುತ್ತಿದ್ದು, ನಗರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆಎಲ್ಇ ಬಿವ್ಹಿಬಿ ವಿಶ್ವವಿದ್ಯಾಲಯ ನಾಳೆ ಅಮೃತ ಮಹೋತ್ಸವ ಆಚರಣೆಗೆ ಸಿದ್ಧವಾಗಿದೆ. ನಾಳೆ ನಡೆಯಲಿರುವ ಕಾರ್ಯಕ್ರಮ ಅಮೃತ ಘಳಿಗೆಗೆ ಸಾಕ್ಷಿಯಾಗಲಿದೆ. ಕೆಎಲ್ಇ ಅಧ್ಯಕ್ಷರಾದ ಪ್ರಭಾಕರ ಕೋರೆಯವರ ಜನ್ಮದಿನ ಹಾಗೂ ಬಿವ್ಹಿಬಿ ತಾಂತ್ರಿಕ ವಿಶ್ವವಿದ್ಯಾಲಯದ ಅಮೃತ ಮಹೋತ್ಸವಕ್ಕೆ ದೇಶ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಜನಪ್ರತಿನಿಧಿಗಳು, ಸಾಧಕರು ಆಗಮಿಸಲಿದ್ದಾರೆ.
ಈಗಾಗಲೇ ಮುಖ್ಯವೇದಿಕೆ ಸಿದ್ದಗೊಂಡಿದ್ದು, ಆಹ್ವಾನಿತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಂಗ್ರೆಸ್ನಿಂದ ಭ್ರಷ್ಟಾಚಾರ ಆರಂಭ
ಇನ್ನು ಬಿಜೆಪಿ ಬ್ಯಾನ್ ಮಾಡುವ ಮುನ್ನವೇ ಜನರು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅನ್ನು ಬ್ಯಾನ್ ಮಾಡಿದ್ದಾರೆ. ಕಾಂಗ್ರೆಸ್ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ನನಗೆ ವಿಚಿತ್ರ ಸಂಗತಿ ಅನ್ನಿಸುತ್ತಿದೆ. ಭ್ರಷ್ಟಾಚಾರ ಆರಂಭವಾಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಎಂದು ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.

ಭ್ರಷ್ಟಾಚಾರದ ತತ್ತಿ ಇಟ್ಟವರು ಕಾಂಗ್ರೆಸ್ನವರು
ನಗರದಲ್ಲಿಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಭ್ರಷ್ಟಾಚಾರ ಆಗಿದೆ. ಆದರೆ ಕಾಂಗ್ರೆಸ್ಯೇತರ ಸರ್ಕಾರ ಇದ್ದಾಗ ಹಗರಣ ಆಗಿಲ್ಲ ಎಂದರು.
ಮೋದಿ ಸರ್ಕಾರದಲ್ಲಿ ಯಾರೊಬ್ಬರೂ ಕೂಡ ಭ್ರಷ್ಟಾಚಾರದ ಧ್ವನಿ ಎತ್ತುವುದಕ್ಕೆ ಸಾಧ್ಯವಿಲ್ಲ. ಭ್ರಷ್ಟಾಚಾರದ ತತ್ತಿ ಇಟ್ಟು ಕಾವು ಕೊಟ್ಟವರು ಕಾಂಗ್ರೆಸ್ಸಿನವರೇ. ಭ್ರಷ್ಟಾಚಾರದ ಬೀಜ ಬಿತ್ತಿದವರು ಇವರೇ. ಇವರೆಲ್ಲ ಪರಮ ಭ್ರಷ್ಟರು. ಡಿ.ಕೆ. ಶಿವಕುಮಾರ್ ಮೊದಲು ತಮ್ಮ ಅಸ್ತಿ ಡಿಕ್ಲೇರ್ ಮಾಡಲಿ ಎಂದು ಸವಾಲು ಹಾಕಿದರು.











Click it and Unblock the Notifications