'ಬೇಕೇ ಬೇಕು, ಬಾರ್ ಬೇಕು': ಧಾರವಾಡದಲ್ಲೊಂದು 'ಟೈಟ್' ಪ್ರತಿಭಟನೆ
ಧಾರವಾಡ, ನವೆಂಬರ್ 22: 'ಬೇಕೇ.. ಬೇಕು ಬಾರ್ ಬೇಕು, ಬೇಡ.. ಬೇಡ... ಬಾರ್ ಮುಚ್ಚೋದು ಬೇಡ' ಹೀಗೆ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡುತ್ತಿದ್ದ ದೃಶ್ಯ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಕಂಡುಬಂದಿತು.
ಧಾರವಾಡದ ಹೆಬ್ಬಳ್ಳಿ ಗ್ರಾಮದ 'ಗೌರವಾನ್ವಿತ' ಕುಡುಕರೆಲ್ಲಾ ಇಂದು ಒಗ್ಗಟ್ಟು ಪ್ರದರ್ಶಿಸಿ ತಮಗೆ ಆಗುತ್ತಿರುವ 'ಅನ್ಯಾಯ'ದ ವಿರುದ್ಧ ಸಿಡಿದು ನಿಂತಿದ್ದರು!
ತಮ್ಮ ಊರು ಹೆಬ್ಬಳ್ಳಿಯಲ್ಲಿ ಮದ್ಯದಂಗಡಿಯನ್ನು ಬಂದ್ ಮಾಡಬೇಕೆಂದು ಮದ್ಯ ವಿರೋಧಿ ಬಣ ಮಾಡಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳು ಮನ್ನಿಸಿ ವೈನ್ ಶಾಪ್ ಮುಚ್ಚಲು ಕ್ರಮ ಕೈಗೊಂಡಿದ್ದರು. ಆದರೆ ಅವರನ್ನು ತಡೆಯಬೇಕೆಂದು ಇಂದು ಕುಡುಕರು ಒಗ್ಗಟ್ಟಾಗಿ ಪ್ರತಿಹೋರಾಟ ಮಾಡಿದರು.

ಕುಡಿದು ಟೈಟಾದ ಕೃಶ ಕಾಯದ ಕೆಲವು ಮಂದಿ ಕುಡುಕರು, ನಿಲ್ಲಲು ತ್ರಾಣವಿಲ್ಲದಿದ್ದರೂ ಸಹ ವೈನ್ ಶಾಪ್ಗಾಗಿ ಬಲು ಪ್ರಯಾಸಪಟ್ಟು ವೈನ್ ಶಾಪ್ ಪರ ಘೋಷಣೆಗಳನ್ನು ಕೂಗಿದರು.
ವೈನ್ ಶಾಪ್ ಮುಚ್ಚಿದರೆ ಕುಡಿಯಲು ನಗರಕ್ಕೆ ಬರಬೇಕಾಗುತ್ತದೆ. ನಮ್ಮ ಅತ್ಯಮೂಲ್ಯ ಸಮಯ ಮತ್ತು ಹಣ ಇದರಿಂದ ವ್ಯರ್ಥವಾಗುತ್ತದೆ ಹಾಗಾಗಿ ಹೆಬ್ಬಳ್ಳಿಯ ವೈನ್ ಶಾಪ್ ಮುಚ್ಚಬೇಡಿ ಎಂದು ಅವರು ಜಿಲ್ಲಾಡಳಿತದ ಬಳಿ ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ಯಾರೋ ಒಬ್ಬ ಪ್ರಥಮ ದರ್ಜೆ ಅಧಿಕಾರಿಯೊಬ್ಬರನ್ನು ಹಿಡಿದು ಕರೆತಂದು ಅವರಿಗೆ ವೈನ್ ಶಾಪ್ ಮುಚ್ಚಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಪತ್ರವೊಂದನ್ನೂ ಬರೆದು ನೀಡಿದರು.











Click it and Unblock the Notifications