ಧಾರವಾಡ : 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಅಂತಿಮ
ಧಾರವಾಡ, ನವೆಂಬರ್ 19 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
'ಧಾರವಾಡದ ಸ್ಥಳೀಯ ಸಾಹಿತಿಗಳು, ಸಂಸ್ಕೃತಿ ಚಿಂತಕರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಸಮ್ಮೇಳನಕ್ಕೆ ಕೃಷಿ ವಿವಿಯ ಆವರಣ ಸೂಕ್ತ ಸ್ಥಳ ಎಂದು ಅಂತಿಮಗೊಳಿಸಲಾಗಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಸೋಮವಾರ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಾಹಿತಿಗಳು, ಉಪ ಸಮಿತಿಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮನು ಬಳಿಗಾರ್ ಅವರು ಸಮ್ಮೇಳನದ ಸ್ಥಳವನ್ನು ಘೋಷಣೆ ಮಾಡಿದ್ದಾರೆ.

ಸಮ್ಮೇಳನ ಆಯೋಜಿಸುವ ಸ್ಥಳದ ಕುರಿತು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಮುಖ್ಯ ವೇದಿಕೆ, ಪುಸ್ತಕ, ವಾಣಿಜ್ಯ ಮಳಿಗೆ, ಸಾರಿಗೆ ಸಂಚಾರ ನಿಯಂತ್ರಣ, ಆಹಾರ ವ್ಯವಸ್ಥೆ ಮೊದಲಾದ 15 ಅಂಶಗಳನ್ನು ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಇನ್ನು ಮುಂದೆ ಸಮ್ಮೇಳನದ ಸಿದ್ಧತೆಯ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಮ್ಮೇಳನಕ್ಕಾಗಿ ಸರ್ಕಾರದಿಂದ 12 ಕೋಟಿ ರೂ.ಗಳ ಅನುದಾನ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರ್.ವಿ.ದೇಶಪಾಂಡೆಯವರು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನವರಿ 4 ರಂದು ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಡಿಸೆಂಬರ್ 20ರವರೆಗೆ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ನಡೆಯಲಿದೆ.

ಈ ಅವಧಿಯಲ್ಲಿ ಮಾತ್ರ ನೋಂದಣಿ ಮಾಡಿಕೊಳ್ಳಲಾಗುವುದು. ನಂತರ ಬಂದರೆ ಊಟ, ವಸತಿ ಸೌಲಭ್ಯ ಕಲ್ಪಿಸಲು ಆಗುವುದಿಲ್ಲ. ಆದರಿಂದ ಸಾಹಿತ್ಯಾಸಕ್ತರು ಡಿಸೆಂಬರ್ 20ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
'ಹಿರಿಯ ವಿಮರ್ಶಕರಾದ ಡಾ. ಸಿ.ಎನ್.ರಾಮಚಂದ್ರನ್ ಅವರ ನೇತೃತ್ವದ ತಜ್ಞರ ತಂಡವು ಗೋಷ್ಠಿಗಳ ಕುರಿತು ಸಲಹೆ ನೀಡಿದೆ. ಅವರ ಸಲಹೆಗಳಂತೆ ಉತ್ತಮ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಎಲ್ಲ ಪ್ರದೇಶಗಳ ತಜ್ಞರಿಗೂ ಸಮಾನ ಅವಕಾಶಗಳು ಸಿಗಲಿವೆ' ಎಂದು ಡಾ. ಮನು ಬಳಿಗಾರ ಹೇಳಿದರು.
ಜನವರಿ 4, 5 ಮತ್ತು 6ರಂದು ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.












Click it and Unblock the Notifications