ಅಮರನಾಥ ಯಾತ್ರೆಗೆ ತೆರಳಿರುವ ಧಾರವಾಡದ 21 ಯಾತ್ರಿಕರು ಸುರಕ್ಷಿತ
ಕಾಶ್ಮೀರದ ಅನಂತ್ನಾಗ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದ ಉಗ್ರರ ದಾಳಿ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ ಘಟನೆ ಮಧ್ಯೆಯೇ ಧಾರವಾಡದಿಂದ ಅಮರನಾಥ ಯಾತ್ರೆಗೆ ತೆರಳಿರುವ ಎಲ್ಲ ೨೧ ಜನ ಯಾತ್ರಿಕರು ಸುರಕ್ಷಿತವಾಗಿದ್ದಾರೆ.
ಧಾರವಾಡ, ಜುಲೈ 12 : ಕಾಶ್ಮೀರದ ಅನಂತ್ ನಾಗ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದ ಉಗ್ರರ ದಾಳಿ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ ಘಟನೆ ಮಧ್ಯೆಯೇ ಧಾರವಾಡದಿಂದ ಅಮರನಾಥ ಯಾತ್ರೆಗೆ ತೆರಳಿರುವ 21 ಜನ ಯಾತ್ರಿಕರು ಸುರಕ್ಷಿತವಾಗಿದ್ದಾರೆ.
ವಿವೇಕಾನಂದ ನಗರದ ಯೋಗ ಶಿಕ್ಷಕ ಪ್ರವೀಣ ಮುರಗೋಡ ನೇತೃತ್ವದ ಯಾತ್ರಿಕರ ತಂಡ ಘಟನಾ ಸ್ಥಳದಿಂದ ಸಾಗಿ ಹೋದ ಮರು ದಿನವೇ ಈ ಅವಘಡ ಸಂಭವಿಸಿದೆ. ಈಗ ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಯಾತ್ರಿಕರು ಅಲ್ಲಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಧಾರವಾಡದಿಂದ ಜುಲೈ 6ರಂದು 21 ಜನರು ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಮೂಲಕ ಯಾತ್ರೆಗೆ ತೆರಳಿದ್ದರು. ಮಂಗಳವಾರ ಸಂಜೆ ಎಲ್ಲ 21 ಜನರು ಅಮರನಾಥದಲ್ಲಿ ಹಿಮಲಿಂಗುವಿನ ದರ್ಶನ ಪಡೆದಿದ್ದು, ಬುಧವಾರ ಅಲ್ಲಿಂದ ವಾಪಸ್ ಆಗಲಿದ್ದಾರೆ.
ಕಟ್ರಾ ವೈಷ್ಣೋದೇವಿ, ಹಿಮಾಚಲ ಪ್ರದೇಶದ ಪಾಂಚವಾದೇವಿ, ಅಮೃತಸರ ಸ್ವರ್ಣಮಂದಿರ, ಕಾಶಿ ವಿಶ್ವನಾಥನ ದರ್ಶನ ಪಡೆದು ಜುಲೈ 23ರಂದು ವಾಪಸ್ ಧಾರವಾಡಕ್ಕೆ ಬರುವುದಾಗಿ ಪ್ರವೀಣ ಮುರಗೋಡ ಹೇಳಿದ್ದಾರೆ.
ಕನ್ನಡಿಗ ಸೈನಿಕರ ಸಹಾಯ ಹಸ್ತ
ಘಟನೆ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಯಾತ್ರಿಕರಿಗೆ ಭಾರತೀಯ ಸೈನ್ಯದಲ್ಲಿರುವ ಧಾರವಾಡ, ಗದಗ ಜಿಲ್ಲೆಯ ಸೈನಿಕರು ನೆರವಿಗೆ ಬಂದಿದ್ದಾರೆ. ಅಮರನಾಥದಲ್ಲಿಯೂ ಈಗ ಭಾರಿ ಭದ್ರತೆ ಕಲ್ಪಿಸಲಾಗಿದೆ. ದೇವರ ದಯೆಯಿಂದ ನಾವು ಅಪಾಯದಿಂದ ಪಾರಾಗಿದ್ದೇವೆ' ಎಂದು ಪ್ರವೀಣ ತಿಳಿಸಿದರು.
ಅಮರನಾಥ ಯಾತ್ರೆಗೆ ತೆರಳಿರುವ ಯಾತ್ರಿಕರು
ಜಿ.ಪಿ.ಮುರಗೋಡ, ಎಸ್.ಕಳ್ಳಿಮನಿ, ವಿಜಯಲಕ್ಷ್ಮೀ ಪಾಟೀಲ, ಆರ್.ಎಸ್.ಕುರಬಗೊಂಡ, ವಿ.ಕೆ. ಹುಡೇದ, ರಕ್ಷಿತಾ ವಿ. ಹುಡೇದ, ವನಜಾ ವಿ.ಹುಡೇದ, ಕೆ.ಆರ್. ಗಾಮನಗಟ್ಟಿ, ಎಲ್.ಕೆ. ಗಾಮನಗಟ್ಟಿ, ನಿರ್ಮಲಾ ಬಿದಿರಿ, ಸವಿತಾ ಹೆಬ್ಬಳ್ಳಿ, ಎಂ.ಎಂ.ದೊಡ್ಡಮನಿ, ಎ.ಎಂ.ದೊಡ್ಡಮನಿ, ಸಂಗಯ್ಯ ಹಿರೇಮಠ, ವೇದಾ ಹಿರೇಮಠ, ಎಸ್.ಎಂ.ಶಂಕರ, ಸೌಭಾಗ್ಯ ಎಚ್.ಸಿ., ಪ್ರಭಾವತಿ ವಡ್ಡೀನ್, ಸವಿತಾ ಜಿ.ಕವಳಿಕಾಯಿ, ಕಲಾವತಿ ಎಸ್.ಮರ್ತೂರ ಯಾತ್ರಿಕರ ತಂಡದ್ದಲಿದ್ದಾರೆ.












Click it and Unblock the Notifications