ಕುಮಾರಸ್ವಾಮಿ ಕಣ್ಣೀರು ಹಾಕುವ ಸಿಎಂ, ಸಿದ್ದರಾಮಯ್ಯ? ಕಟೀಲ್ ವ್ಯಂಗ್ಯ
ದಾವಣಗೆರೆ, ಫೆಬ್ರವರಿ 15: ಯಡಿಯೂರಪ್ಪ ಕಣ್ಣೀರು ಒರೆಸುವ ಮುಖ್ಯಮಂತ್ರಿ, ಈ ಹಿಂದೆ ಇದ್ದ ಕುಮಾರಸ್ವಾಮಿ ಕಣ್ಣೀರು ಹಾಕುವ ಮುಖ್ಯಮಂತ್ರಿ, ಸಿದ್ದರಾಮಯ್ಯ ಕಣ್ಣೀರು ಬರಿಸುವ ಮುಖ್ಯಮಂತ್ರಿ. ಜೊತೆಗೆ ನರಹಂತಕ ಮುಖ್ಯಮಂತ್ರಿ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದು ನೊಂದವರಿಗೆ ನೆರವಾಗಿದ್ದರು. ಆದರೆ ಈ ಹಿಂದೆ ಕುಮಾರಸ್ವಾಮಿ ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಿದ್ದರು. ಯಡಿಯೂರಪ್ಪ ಮಾತ್ರ ಎಂದಿಗೂ ಅಧಿಕಾರಕ್ಕಾಗಿ ಆಸೆಪಡಲಿಲ್ಲ. ಅವರೊಬ್ಬ ನಮ್ಮ ರಾಜ್ಯ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ" ಎಂದರು.
"ಸರ್ಕಾರದ ಅಧಿಕಾರ ಸಂಪುಟ ವಿಸ್ತರಣೆ ಯಾವಾಗ ಯಾವಾಗ ಎಂದು ಕೇಳುತ್ತಿದ್ದರು. ನಮ್ಮನ್ನು ನಂಬಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೇವೆ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಯಡಿಯೂರಪ್ಪನವರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು 6 ತಿಂಗಳು ಆದರೂ ಕಾಂಗ್ರೆಸ್ ನಲ್ಲಿ ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ದೆಹಲಿಯಿಂದ ಸೋನಿಯಾಗಾಂಧಿ ಮೇಸ್ತ್ರಿಗಳನ್ನು ಕಳುಹಿಸಿದರು ತೇಪೆ ಹಾಕಲು. ಕೊನೆಗೆ ಮೂರು ಮೂರು ಬಾರಿ ಸೋನಿಯಾ ಗಾಂಧಿ ದೆಹಲಿಗೆ ಕರೆಸಿದರು, ಆದರೂ ಏನು ಆಗಿಲ್ಲ. ರಾಜ್ಯಾಧ್ಯಕ್ಷರನ್ನು ಮಾಡಿದ ಮಾರನೇ ದಿನವೇ ಬಂಡಾಯ ಏಳುತ್ತದೆ. ಕಾಂಗ್ರೆಸ್ ಪಕ್ಷ ಒಡೆಯುತ್ತದೆ. ಹೀಗಾಗಿ ನಮಗೆ ಪ್ರಶ್ನೆ ಮಾಡುವ ನೈತಿಕ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ" ಎಂದು ಕಟೀಲು ವಾಗ್ದಾಳಿ ನಡೆಸಿದರು.

"ಮತ ಬ್ಯಾಂಕ್ ಗಾಗಿ ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪೌರತ್ವ ತಿದ್ದುಪಡಿಗೆ ಅಡ್ಡಿ ಮಾಡುತ್ತಿದ್ದಾರೆ. ಸಂವಿಧಾನ ವಿರೋಧ ಮಾಡಿದವರು ದೇಶದ್ರೋಹಿಗಳು ಎಂದು ಇವರೇ ಹೇಳುತ್ತಾರೆ. ಈಗ ಸಂವಿಧಾನವನ್ನು ವಿರೋಧ ಮಾಡುತ್ತಿರುವ ದೇಶದ್ರೋಹಿಗಳು ಯಾರು" ಎಂದು ವ್ಯಂಗ್ಯವಾಡಿದರು.












Click it and Unblock the Notifications