ಲಾಕಪ್ ಡೆತ್ ಅನುಮಾನ; ಮಾಯಕೊಂಡ ಠಾಣೆಯ ಮೂವರು ಪೊಲೀಸರ ಅಮಾನತು
ದಾವಣಗೆರೆ, ಅಕ್ಟೋಬರ್ 7; ಯುವತಿಯ ಜೊತೆ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಅ.5ರ ಸಂಜೆ ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದು, ಠಾಣೆಗೆ ಸ್ವಲ್ಪ ದೂರದಲ್ಲೇ ಆ ವ್ಯಕ್ತಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ವ್ಯಕ್ತಿಯ ಕುಟುಂಬಸ್ಥರು ಇದೀಗ ಪೊಲೀಸರ ಮೇಲೆ ಆರೋಪಿಸಿದ್ದು, ಪ್ರಕರಣದಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕೌಟುಂಬಿಕ ಕಲಹಕ್ಕೆ ಸಂಬಂಧ ಪಟ್ಟಂತೆ ವಿಠಲಪುರ ಗ್ರಾಮದ ಮರುಳ ಸಿದ್ದಪ್ಪ ಎಂಬುವರ ವಿರುದ್ಧ ಅವರ ಪತ್ನಿ ದೂರು ನೀಡಿದ್ದರು. ಮರುಳ ಸಿದ್ದಪ್ಪನನ್ನು ವಿಚಾರಣೆ ಹೆಸರಿನಲ್ಲಿ ಅಕ್ಟೋಬರ್ 5ರ ಸೋಮವಾರ ದಾವಣಗೆರೆಯ ಮಾಯಕೊಂಡ ಪೊಲೀಸ್ ಠಾಣೆಗೆ ಕರೆತಂದಿದ್ದರು. ಆದರೆ ಇಂದು ಬೆಳಗ್ಗೆ ರೈಲ್ವೇ ಸ್ಟೇಷನ್ ಸಮೀಪ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮಂಡ್ಯ: ಲಾಕಪ್ ಡೆತ್ ಪ್ರಕರಣ ಮೂವರು ಕಾನ್ಸ್ಟೇಬಲ್ ಅಮಾನತು
ಮಾಯಕೊಂಡದ ಪೊಲೀಸ್ ಠಾಣೆಯ ಸಮೀಪದಲ್ಲಿನ ರೈಲ್ವೇ ಸ್ಟೇಷನ್ ಬಳಿ ಈತ ಸಾವನ್ನಪ್ಪಿದ್ದು, ಮೊನ್ನೆ ಪ್ರಕರಣವೊಂದರ ವಿಚಾರವಾಗಿ ರಾತ್ರಿಯೆಲ್ಲಾ ಪೊಲೀಸ್ ಠಾಣೆಯಲ್ಲೇ ಇದ್ದ ಎಂಬುದು ತಿಳಿದುಬಂದಿದೆ. ವಿಚಾರಣೆ ಹೆಸರಿನಲ್ಲಿ ಪೊಲೀಸರು ಈತನ ಮೇಲೆ ಹಲ್ಲೆ ನಡೆಸಿ, ಸಾವನ್ನಪ್ಪಿದ ಬಳಿಕ ಇಲ್ಲಿ ಹಾಕಿ ಹೋಗಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮರುಳ ಸಿದ್ದಪ್ಪ ಸಾವಿನ ಸುದ್ದಿ ತಿಳಿದು ನೂರಾರು ಜನ ಪೊಲೀಸ್ ಠಾಣೆ ಎದುರು ಸೇರಿದ್ದು, ಅಲ್ಲಿಂದ ಶವ ಎತ್ತುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆರು ಕಡೆ ಸಿ.ಸಿ ಕ್ಯಾಮರಾಗಳಿವೆ. ಈತ ಎಷ್ಟು ಸಮಯಕ್ಕೆ ಪೊಲೀಸ್ ಠಾಣೆಗೆ ಬಂದಿದ್ದ, ಯಾವಾಗ ಹೊರ ಹೋದ ಎಂಬುದನ್ನು ಪರಿಶೀಲಿಸಿ ಎಂದು ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.
Recommended Video
ಪೊಲೀಸ್ ವಶದಲ್ಲಿದ್ದ ಮಗ ತಾಯಿಯ ಎದುರೇ ಸಾವು: ಠಾಣೆಯ ವಿರುದ್ಧ ದೂರು
ಸದ್ಯಕ್ಕೆ ಇದೊಂದು ಅನುಮಾನಾಸ್ಪದ ಸಾವು ಎಂದು ದಾಖಲಿಸಿ, ಸಾವಿಗೆ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ್, ಹೆಡ್ ಕಾನ್ ಸ್ಟೆಬಲ್ ನಾಗರಾಜ್, ಕಾನ್ ಸ್ಟೆಬಲ್ ಶೇರ್ ಅಲಿ ಎಂಬುವರನ್ನು ಅಮಾನತು ಮಾಡಿದ್ದಾರೆ.