ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
ದಾವಣಗೆರೆ, ಜನವರಿ 27; ಮೂರು ನಾಲ್ಕು ಹಳ್ಳಿಯ ಜನರು ಒಂದು ಕೋಣಕ್ಕಾಗಿ ವಾದ-ಪ್ರತಿವಾದ ಮಾಡಿಕೊಂಡರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಿವಾದ ಪೊಲೀಸರ ಪ್ರವೇಶದಿಂದಾಗಿ ಇತ್ಯರ್ಥಗೊಂಡ ಕುತೂಹಲಕಾರಿ ಘಟನೆ ನಡೆದಿದೆ.
ಸಾಸ್ವೆಹಳ್ಳಿಯ ಆಂಜನೇಯ ದೇವಾಲಯ ಸಮಿತಿಯ ಅಧ್ಯಕ್ಷ ನಾಗೇಂದ್ರಪ್ಪ ಅವರು ಹೇಳುವ ಪ್ರಕಾರ, "ನಾಲ್ಕು ವರ್ಷಗಳ ಹಿಂದೆ ಮರಿಕೋಣವು ಸಾಸ್ವೆಹಳ್ಳಿ ಗ್ರಾಮಕ್ಕೆ ಎಲ್ಲಿಂದಲೋ ಬಂದಿತ್ತು. ಇಲ್ಲಿ ಓಡಾಡಿಕೊಂಡಿದ್ದ ಕೋಣವು ನಮ್ಮ ಎಮ್ಮೆಗಳ ಜೊತೆಯಲ್ಲಿಯೇ ಸುತ್ತಾಡಿಕೊಂಡಿತ್ತು. ಮನೆ ಮಗನಂತೆ ಆಗಿಬಿಟ್ಟಿತ್ತು".
"ಈಗ ತಮ್ಮೂರಿನ ದೇವರ ಕೋಣ ಎಂದು ಮೂರ್ನಾಲ್ಕು ಹಳ್ಳಿಯವರು ಕೇಳುತ್ತಿದ್ದಾರೆ. ಆಂಜನೇಯನು ಈ ಸಮಸ್ಯೆಯನ್ನು ಯಾವುದೇ ರೀತಿಯಲ್ಲಿ ಜಗಳವಾಗದಂತೆ ಇತ್ಯರ್ಥಗೊಳಿಸಲಿ" ಎಂದು ಹೇಳಿದ್ದರು.
ಭದ್ರಾವತಿ ತಾಲ್ಲೂಕಿನ ಜಂಬರಗಟ್ಟೆ ಗ್ರಾಮದಿಂದ 70 ಜನರು ಬಂದು, 15 ದಿನಗಳಿಂದ ಕೋಣವನ್ನು ಹುಡುಕುತ್ತಿದ್ದೆವು. ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತಾ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ ಎಂದರು.

ಕೋಣ ಕೇಳಲು ಬಂದಾಗ ತಕರಾರು
ಕೋಣವನ್ನು ಒಯ್ಯಲು ಭಾನುವಾರ ಬಂದಾಗ ನ್ಯಾಮತಿ ತಾಲೂಕಿನ ಮಡಿಕೆ ಚೀಲೂರಿನವರು ತಮ್ಮ ಕೋಣ ಎಂದು ತಕರಾರು ತೆಗೆದರು. ಕೋಟೆ ಆಂಜನೇಯ ದೇವಾಲಯ ಸಮಿತಿಯವರು ಗ್ರಾಮದಲ್ಲಿ ಹನುಮಂತ ದೇವರ ಅಪ್ಪಣೆ ಕೇಳಿ ಯಾರಿಗೆ ವರ ನೀಡುತ್ತದೆಯೋ ಅವರು ಕೋಣ ತೆಗೆದುಕೊಂಡು ಹೋಗಬಹುದು ಎಂದರು. ಮಧ್ಯರಾತ್ರಿಯವರೆಗೂ ಯಾರಿಗೂ ದೇವರು ಅಪ್ಪಣೆ ನೀಡಲಿಲ್ಲ. ಕೊನೆಗೆ ನಿಮ್ಮೂರಿನ ದೇವರ ಅಪ್ಪಣೆ ಪಡೆದು ಕೋಣವನ್ನು ಒಯ್ಯಿರಿ ಎಂದು ಸೂಚಿಸಿದರು.

ಕೋಣ ಯಾರಿಗೆ ಸೇರಿದ್ದು?
ಸೋಮವಾರ ಬೆಳಗ್ಗೆ ಮಡಿಕೆ ಚೀಲೂರಿನವರಿಗೆ ದೇವರು ಅಪ್ಪಣೆ ನೀಡದ ಕಾರಣ ಅವರು ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯುವಂತೆ ಸೂಚಿಸಿದರು. ಜಂಬರಗಟ್ಟೆ ಗ್ರಾಮದ ದೇವತೆ ಅಪ್ಪಣೆ ನೀಡಿದ ಕಾರಣ ಕೋಣವನ್ನು ಒಯ್ಯಲು ಗ್ರಾಮದ ಮುಖಂಡ ರಾಮಪ್ಪ ನೇತೃತ್ವದಲ್ಲಿ ವಾಹನದಲ್ಲಿ ಒಯ್ಯಲು ಸಿದ್ಧತೆ ಮಾಡಿಕೊಂಡಿದ್ದರು. ಹನುಮಪ್ಪ ದೇವರಿಗೆ ಹಾಗೂ ದೇವರ ಕೋಣನಿಗೆ ಪೂಜೆ ಸಲ್ಲಿಸಿದರು.

ಮತ್ತೊಂದು ಗ್ರಾಮದ ಜನರು ಬಂದರು
ಅದೇ ಸಮಯಕ್ಕೆ ಮರಿಗೊಂಡನಹಳ್ಳಿಯ ಮುಖ್ಯಸ್ಥರಾದ ಶೇಖರಪ್ಪ, ಸ್ವಾಮಿ ಪೊಲೀಸರೊಂದಿಗೆ ಬಂದರು. ಇದು ನಮ್ಮೂರಿನ ಕೋಣ ಎಂದು ತಕರಾರು ತೆಗೆದರು. ಎಎಸ್ಐ ಟಿ. ಪರಶುರಾಮಪ್ಪ ಎರಡೂ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿ ಚರ್ಚಿಸಿದರು. ಸಮಸ್ಯೆ ಬಿಗಡಾಯಿಸಿದ್ದರಿಂದ ಕೋಣವನ್ನು ಪೊಲೀಸ್ ಠಾಣೆಗೆ ವಾಹನ ಸಮೇತ ಕರೆದುಕೊಂಡು ಹೋಗಲಾಯಿತು.

ಜಂಬರಗಟ್ಟೆ ಗ್ರಾಮಕ್ಕೆ ಕೋಣ
ಸೋಮವಾರ ರಾತ್ರಿ ಹೊನ್ನಾಳಿ ಎಸ್ಐ ಬಸವನಗೌಡ ಬಿರಾದಾರ್ ಆಗಮಿಸಿ ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ, ಕೋಣಕ್ಕಾಗಿ ಗ್ರಾಮಗಳ ನಡುವೆ ವೈಷಮ್ಯ ಮೂಡಿಸುವುದು ಬೇಡ ಎಂದು ಸಂಧಾನ ಸೂತ್ರ ಅನುಸರಿಸಿದರು. ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ, ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದರು.
Recommended Video

ಬೇಲಿಮಲ್ಲೂರು ಕೋಣದ ಸ್ಮರಣೆ
ಇಂತಹ ಕ್ಲಿಷ್ಟಕರ ಸಮಸ್ಯೆಗಳು ನಿತ್ಯ ನಡೆಯುತ್ತಿರುತ್ತವೆ. ಕಳೆದ ವರ್ಷ ಬೇಲಿಮಲ್ಲೂರು ಗ್ರಾಮದ ಕೋಣದ ಗಲಾಟೆಯು ವಿಕೋಪಕ್ಕೆ ಹೋಗಿರುವುದನ್ನು ಸ್ಮರಿಸಬಹುದು. ಆದ್ದರಿಂದ ಪ್ರತಿ ಗ್ರಾಮದವರು ತಮ್ಮ ಊರಿನ ಕೋಣಗಳಿಗೆ ಗುರುತಿನ ಬಳೆ ಹಾಕುವುದು, ವರ್ಷಕೊಮ್ಮೆ ಕೋಣ ಎಲ್ಲಿದೆ? ಎಂದು ತಿಳಿದು ಇಟ್ಟುಕೊಳ್ಳುವುದು ಒಳ್ಳೆಯದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಎಸ್ಐ ಬಸವನಗೌಡ ಬಿರಾದಾರ್ ಸಲಹೆ ನೀಡಿದ್ದಾರೆ.












Click it and Unblock the Notifications