ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧಿವೇಶನ ಫೆಬ್ರವರಿಗೆ ಮುಂದೂಡಿಕೆ
ದಾವಣಗೆರೆ, ಡಿಸೆಂಬರ್ 19: ಬೆಳಗಾವಿಯಲ್ಲಿ ವಿಧಾನಸಭಾ ಹಾಗೂ ವಿಧಾನ ಪರಿಷತ್ ಅಧಿವೇಶನ ನಡೆಯುವ ಕಾರಣಕ್ಕೆ ಡಿಸೆಂಬರ್ 24, 25, 26ರಂದು ದಾವಣಗೆರೆಯಲ್ಲಿ ನಿಗದಿಯಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ರಾಷ್ಟ್ರೀಯ ಅಧಿವೇಶನ ಮುಂದೂಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ," ಜನಪ್ರತಿನಿಧಿಗಳ ಭಾಗವಹಿಸುವಿಕೆ, ವಿಚಾರಧಾರೆಗಳು ಸಮಾಜಕ್ಕೆ ದಿಕ್ಸೂಚಿ ಆಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲಾಧ್ಯಕ್ಷರು ಸಂಘಟನೆಗೆ ಲಭ್ಯವಿರುವ ಸಮಯ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಬದಲಾದ ಪರಿಸ್ಥಿತಿಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ಕೇಳಿ ಬಂದಿದ್ದರಿಂದ ಬದಲಾವಣೆ ಸರಿಯೆನಿಸಿದೆ. ಹಾಗಾಗಿ, ಮುಂಬರುವ 2023ರ ಫೆಬ್ರವರಿ 11, 12, 13ರಂದು ಮೊದಲೇ ನಿಗದಿಯಾಗಿದ್ದ ಎಸ್. ಎಸ್. ಬಡಾವಣೆಯಲ್ಲಿರುವ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ವೈಭವದಿಂದ ನಡೆಯಲಿದೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ರಾಷ್ಟ್ರೀಯ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
Breaking; ಧಾರ್ಮಿಕ ಸ್ಥಳಗಳಿಗೆ ಕೆಎಸ್ಆರ್ಟಿಸಿ ಬಸ್, ವೇಳಾಪಟ್ಟಿ
ಬೇರೆ ಯಾವುದೇ ಕಾರಣಕ್ಕೋ ಮುಂದೂಡಿಕೆ ಮಾಡಲಾಗಿದೆ. ಕೆಲವರು ರದ್ದು ಮಾಡಲಾಗಿದೆ ಎಂಬ ವದಂತಿ ಹಬ್ಬಿಸುತ್ತಿದ್ದು, ಇದು ಸುಳ್ಳು. ಇಂಥ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಹೇಳಿದರು.
ಗೊಂದಲ ಸೃಷ್ಟಿಸುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ
ಜಾಗತಿಕ ಲಿಂಗಾಯತ ಮಹಾಸಭಾವು ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ನಡೆಸಲು ಮುಂದಾಗಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನು ಬೇಕಾದರೂ ಮಾಡಲಿ. ಮಹಾಸಭಾಕ್ಕೆ 118 ವರ್ಷಗಳ ಭವ್ಯ ಇತಿಹಾಸ, ಪರಂಪರೆ ಇದೆ. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ. ವೀರಶೈವ ಲಿಂಗಾಯತ ಎಂಬುದು ಮೊದಲಿನಿಂದಲೂ ಇದೆ. ಹಾಗಾಗಿ, ಗೊಂದಲ ಸೃಷ್ಟಿಸುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನನ್ನನ್ನು ಯಾರೇ ಟಾರ್ಗೆಟ್ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.
ಮಹಾಸಭಾ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ
ಕೆಲವರು ಕೆಲ ವಿಚಾರಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗುತ್ತಾರೆ. ಇದಕ್ಕೆ ಜನರು ಸೊಪ್ಪು ಹಾಕುವುದಿಲ್ಲ. ಇದು ಕೇವಲ ಕಾಂಗ್ರೆಸ್ ಆಧಾರಿತ ಮಹಾಸಭಾ ಅಲ್ಲ. ಬಿಜೆಪಿಯ ಮುಖಂಡರಾದ ಪ್ರಭಾಕರ ಕೋರೆ, ವೀರಣ್ಣ ಚರಂತಿಮಠ್ ಸೇರಿದಂತೆ ಬೇರೆ ಬೇರೆ ಪಕ್ಷದ ಪದಾಧಿಕಾರಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಇನ್ನು ಮಹಾಸಭಾ ಮಹಾ ಅಧಿವೇಶನಕ್ಕೆ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಮುಖಂಡರನ್ನು ಆಹ್ವಾನಿಸಿದ್ದೇವೆ. ಸಚಿವರನ್ನೂ ಕರೆದಿದ್ದೇವೆ.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೂ ಆಹ್ವಾನ ಕೊಟ್ಟಿದ್ದೇವು. ಕಾರಣಾಂತರಗಳಿಂದ ಮುಂದೂಡಿಕೆಯಾಗಿದೆ. ಮಹಾಸಭಾ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದು ಅಲ್ಲ. ನಾನಾಗಲೀ, ಈಶ್ವರ ಖಂಡ್ರೆಯಾಗಲಿ ಅಧಿಕಾರ ದುರುಪಯೋಗಮಾಡಿಕೊಂಡಿಲ್ಲ. ಬೈಲಾ ಪ್ರಕಾರವೇ ಅಖಿಲ ಭಾರತ ವೀರಶೈವ ಮಹಸಭಾ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಯಾವುದೇ ಕೋರ್ಟ್ ನೊಟೀಸ್ ನನಗೆ ಬಂದಿಲ್ಲ ಎಂದರು.
ಯಾವುದೇ ಭ್ರಷ್ಟಾಚಾರ ಮಾಡಿದ್ದರೆ ಹೊರಗೆ ತೆಗೆಯಲಿ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅದರ ಮೇಲೆ ಆಸ್ಪತ್ರೆ ಕಟ್ಟಲಾಗಿದೆ. ಇದೇ ರೀತಿಯ ಭ್ರಷ್ಟಾಚಾರ ಹೊರಗೆಳೆಯುತ್ತೇನೆ ಎನ್ನುವ ಎಸ್.ಎಂ. ಜಾಮದಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ಈ ಆರೋಪ ಸುಳ್ಳು. ಯಾವುದೇ ಭ್ರಷ್ಟಾಚಾರ ಮಾಡಿದ್ದರೆ ಹೊರಗೆ ತೆಗೆಯಲಿ. ಬೇಡವೆಂದವರು ಯಾರು..? ಇಷ್ಟು ದಿನ ಏನು ಮಾಡುತ್ತಿದ್ದರು. ಅವರೇನೂ ಮಾಡಿದ್ದಾರೆ ಎಂಬುದು ನನಗೂ ಗೊತ್ತಿದೆ . ಈ ಆರೋಪ ಶುದ್ಧ ಸುಳ್ಳು. ಬಿಡಿಎ, ಬಿಬಿಎಂಪಿ ಹಾಗೂ ಸರ್ಕಾರದ ಪರವಾನಗಿ ಪಡೆದು ಎಲ್ಲಾ ನಿಯಮಗಳನ್ನು ಅನುಸರಿಸಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಉಳಿದ ಮಠಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ
ಈ ವೇಳೆ ಉಪಸ್ಥಿತರಿದ್ದ ಮಹಾಸಭಾದ ಮುಖಂಡ ಅಥಣಿ ವೀರಣ್ಣ ಮಾತನಾಡಿ, ಮಠ ಮಾನ್ಯಗಳನ್ನು ಸರ್ಕಾರವು ಮಧ್ಯಪ್ರವೇಶಿಸಿ ವಶಪಡಿಸಿಕೊಳ್ಳುವ ಅಧಿಕಾರ ಇದೆ. ಹಗರಣ, ಭ್ರಷ್ಟಾಚಾರ ಸೇರಿದಂತೆ ಇನ್ನಿತರೆ ಸಮಾಜಕ್ಕೆ ಧಕ್ಕೆ ವಿಚಾರಗಳು ಬಂದಾಗ ಕ್ರಮಕ್ಕೆ ಮುಂದಾಗಬಹುದು. ಆದರೆ ಮಹಾಸಭಾ ಮಧ್ಯಪ್ರವೇಶಿಸಲು ಹೋಗುವುದಿಲ್ಲ. ಚಿತ್ರದುರ್ಗದ ಮುರುಘಾಮಠದಂಥ ಕೆಲ ಮಠಗಳಲ್ಲಿ ಆಗಬಾರದ್ದು ಆಗಿದೆ. ಇದನ್ನು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ರಾಜ್ಯದ ಎಲ್ಲಾ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವವಿದೆ. ಕೆಲ ಮಠಗಳಲ್ಲಿ ಅಷ್ಟೇ ಈರೀತಿ ಆಗಿದೆ. ಉಳಿದ ಮಠಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅನ್ನದಾಸೋಹ, ಜ್ಞಾನದಾಸೋಹ, ಶಿಕ್ಷಣ ದಾಸೋಹ ನೀಡಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಹಾಸಭಾದ ಮುಖಂಡರಾದ ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಸಂದೀಪ್ ಅಣಬೇರು, ಬಿ. ಜಿ. ರಮೇಶ್, ಕೆ. ಆರ್. ಸಿದ್ದೇಶ್, ಐಗೂರು ಚಂದ್ರಶೇಖರ್, ಶುಭಾ ಐನಳ್ಳಿ, ಶಶಿಕಲಾ ಮೂರ್ತಿ, ನಿರ್ಮಲಾ ಸುಭಾಷ್, ಅಜ್ಜಂಪುರ ವಿಜಯಕುಮಾರ್, ಶಂಭು ಉರೇಕೊಡಿ ಮತ್ತಿತರರು ಉಪಸ್ಥಿತರಿದ್ದರು.